Publish Date: Sat, 20 Aug 2022 (18:45 IST)
Updated Date: Sat, 20 Aug 2022 (18:48 IST)
ಕನ್ನಡ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಸೀರಿಯಲ್ನ ನಾಯಕ ನಟ ಅನಿರುದ್ಧ್ ಅವರ ಮೇಲೆ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ 2 ವರ್ಷಗಳ ಕಾಲ ನಿಷೇಧ ಹೇರಿದೆ. ಈ ಮೂಲಕ ಕಿರುತೆರೆಯ ಯಾವುದೇ ಕಾರ್ಯಕ್ರಮಗಳಲ್ಲಿ ಅನಿರುದ್ಧ್ಗೆ ಅವಕಾಶ ಕೊಡದಂತೆ ನಿರ್ಧರಿಸಲಾಗಿದೆ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ತಿಳಿಸಿದ್ದಾರೆ. ನಟ ಅನಿರುದ್ಧ್ ಅವರ ಜೊತೆ ತಂತ್ರಜ್ಞರ ತಂಡ ಮುನಿಸಿಕೊಂಡಿದ್ದು, ಹೀಗಾಗಿ ಅವರನ್ನು ಸೀರಿಯಲ್ನಿಂದ ಕೈ ಬಿಡಲು ನಿರ್ಧರಿಸಲಾಗಿದೆ. ನಾವು ಅನಿರುದ್ಧ್ ಅವರನ್ನು ಬ್ಯಾನ್ ಮಾಡಿಲ್ಲ. ಆದರೆ ಎರಡು ವರ್ಷ ಅವರನ್ನು ಕಿರುತೆರೆಯಿಂದ ದೂರ ಇಡುತ್ತಿದ್ದೇವೆ ಎಂದು ಭಾಸ್ಕರ್ ತಿಳಿಸಿದ್ದಾರೆ. ಅನಿರುದ್ಧ್ ಅವರು ಜೊತೆ ಜೊತೆಯಲಿ ಧಾರಾವಾಹಿ ತಂಡ ಪ್ರಮುಖರೊಬ್ಬರನ್ನು ಮೂರ್ಖ ಎಂದು ಕರೆದಿದ್ದಾರೆ. ಸ್ಕ್ರಿಪ್ಟ್ ವಿಚಾರಕ್ಕೆ ನಿಂದಿಸಿ ಶೂಟಿಂಗ್ ಸೆಟ್ನಿಂದ ಹೊರ ಹೋಗಿದ್ದಾರೆ. ಈ ವೇಳೆ ಕಿರಿಕ್ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಕೂಡ ಧಾರವಾಹಿ ತಂಡದ ಜೊತೆ ಜಗಳ ಆಡಿಕೊಂಡು ಅನಿರುದ್ಧ್ ಶೂಟಿಂಗ್ ಮಾಡದೇ ಹೊರ ನಡೆದಿದ್ದರು. ಅವರ ಇಂತಹ ನಡೆಯನ್ನ ಸಹಿಸಿ ಸಾಕಾಗಿದೆ. ಹಲವು ಭಾರಿ ಇಂತಹ ಘಟನೆ ಪುನಾರಾವರ್ತನೆಯಾಗಿದ್ದು, ಹೀಗಾಗಿ ಈ ನಿರ್ಧಾರ ಮಾಡಿದ್ದೇವೆ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.