Publish Date: Fri, 17 Jun 2022 (18:34 IST)
Updated Date: Fri, 17 Jun 2022 (19:00 IST)
ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ಅಗ್ನಿಪಥ್ ಯೋಜನೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು, ಉತ್ತರ ಪ್ರದೇಶದಲ್ಲಿ ಪೊಲೀಸ್ ಠಾಣೆಗೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ.
ಉತ್ತರ ಪ್ರದೇಶದ ಆಲಿಘರ್ನ ಜತ್ತಾರಿ ಪೊಲೀಸ್ ಠಾಣೆಗೆ ಹಾಗು ಅಲ್ಲಿದ್ದ ಸರ್ಕಾರಿ ವಾಹನಗಳಿಗೆ ಬೆಂಕಿ ಆಕ್ರೋಶ ಹೊರ ಹಾಕಿದ್ದಾರೆ. ಉತ್ತರಪ್ರದೇಶದ ಆರು ಜಿಲ್ಲೆಗಳಲ್ಲಿ ಪ್ರತಿಭಟನೆಯ ಕಿಚ್ಚು ಜೋರಾಗಿದ್ದು ಕೆಲವೆಡೆ ರಸ್ತೆ ತಡೆ ಭದ್ರತಾ ಪಡೆಗಳ ಮೇಲೆ ಕಲ್ಲುತೂರಾಟ ನಡೆದಿದೆ ಎಂದು ವರದಿಯಾಗಿದೆ.
ಉತ್ತರಪ್ರದೇಶದ ಆಗ್ರಾ, ಆಲಿಘರ್, ಬುಲಂದರ್ಶಹರ್, ಮಥುರಾ, ಫಿರೋಜಾಬಾದ್ ಹಾಗೂ ಬಲಿಯಾ ಜಿಲ್ಲೆಗಳಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ಕೆಲವೆಡೆ ಬಸ್ ಗಳ ಮೇಲೆ ಕಲ್ಲುತೂರಾಟ ನಡೆಸಲಾಗಿದೆ.
ಉತ್ತರಪ್ರದೇಶದಾದ್ಯಂತ ಸಂಚರಿಸುವ 21 ರೈಲುಗಳ ಸಂಚಾರವನ್ನ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇಲ್ಲಿಯವರೆಗು ಒಟ್ಟು ನಾಲ್ಕು ರೈಲುಗಳಿಗೆ ಬೆಂಕಿ ಹಚ್ಚಲಾಗಿದ್ದು ಬಿಹಾರದಲ್ಲಿ 2, ಉತ್ತರ ಪ್ರದೇಶ ಹಾಗೂ ತೆಲಂಗಾಣದಲ್ಲಿ ತಲಾ ಒಂದು ರೈಲಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ.
ಇದೇ ವೇಳೆ ಹರಿಯಾಣದಲ್ಲಿ ಪ್ರತಿಭಟನೆಯ ಕಿಚ್ಚು ಜೋರಾಗಿದ್ದು ರಾಜ್ಯದ್ಯಂತ ಮುಂದಿನ ಆದೇಶದವರೆಗೂ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.