Publish Date: Fri, 10 Sep 2021 (19:48 IST)
Updated Date: Fri, 10 Sep 2021 (20:16 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆ, ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲಾಗುತ್ತಿದ್ದು, ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಸದರಿ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ: 09-09-2021ರಂದು ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ ರವರು ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್ ಬಳಿ ನಾಗರಭಾವಿ ಸರ್ವೀಸ್ ರಸ್ತೆಯಿಂದ ನಾಯಂಡಹಳ್ಳಿ ರಿಂಗ್ ರಸ್ತೆ ಕಡೆ ಬರುವ ಸರ್ವೀಸ್ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಮಳೆ ಬಿದ್ದಾಗ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸಂಚಾರದ ವೇಳೆ ಸಂಚಾರ ದಟ್ಟಣೆಯಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ಹೆಚ್ಚು ಸಮಸ್ಯೆ ಆಗಲಿದ್ದು, ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಕೋರಲಾಗಿತ್ತು.
ಅದರಂತೆ ಪಾಲಿಕೆಯ ಸಂಚಾರಿ ಇಂಜಿನಿಯರಿಂಗ್ ವಿಭಾಗವು ಕೂಡಲೆ ಕ್ರಮ ಕೈಗೊಂಡು ನಿನ್ನೆ ರಾತ್ರಿ ಅಗತ್ಯ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳನ್ನು ನಿಯೋಜನೆ ಮಾಡಿಕೊಂಡು ದುರಸ್ತಿ ಕಾಮಗಾರಿ ನಡೆಸಿ ಇಂದು ಬೆಳಗ್ಗೆ 2.30ರ ವೇಳೆಗೆ ಡಾಂಬರು ಹಾಕಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ದುರಸ್ತಿ ಕಾಮಗಾರಿ ವೇಳೆ ಪಾಲಿಕೆ ಇಂಜಿನಿಯರ್, ಸಂಚಾರಿ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು, ರಸ್ತೆ ಮೇಲೆ ನೀರು ನಿಲ್ಲದಂತೆ ಶೋಲ್ಡರ್ ಡ್ರೈನ್ ಮೂಲಕ ರಾಜಕಾಲುವೆಗೆ ಸರಾಗವಾಗಿ ನೀರು ಹರಿದು ಹೋಗುವಂತೆ ಡಾಂಬರನ್ನು ಅಳವಡಿಸಲಾಗಿರುತ್ತದೆ.
ಪಾಲಿಕೆಯ ಎಂಟೂ ವಲಯಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದ್ದು, ದಿನಾಂಕ:10/09/2021 ರಂದು(ಇಂದು) ಜರಗನಹಳ್ಳಿ, ಬನಶಂಕರಿ 2ನೇ ಹಂತ, ಹೆಚ್.ಎಂ.ಟಿ ಲೇಔಟ್, ಯಡಿಯೂರು, ಬೆಳ್ಳಂದೂರು, ಸಿದ್ದಣ್ಣ ಲೇಔಟ್, ತಿಗರಳ ಪಾಳ್ಯ(ಹೂಡಿ), ನ್ಯೂ ಬಿ.ಇ.ಎಲ್ ರಸ್ತೆ, ಭೂಪಸಂದ್ರ, ಹೆಬ್ಬಾಳ ಮುಖ್ಯ ರಸ್ತೆ ಸೇರಿದಂತೆ ಇನ್ನಿತರೆ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲಾಗಿದ್ದು, ಹಾಗೂ ನಗರದ ಎಲ್ಲಾ ಕಡೆ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ.