ಧಾರವಾಡ: ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಸ್ನೇಹಿತನ ಪ್ರೀತಿಗೆ ಮರುಳಾಗಿ ತನ್ನ ಪತಿ ಬಿಟ್ಟು ಬಂದ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ಧಾರವಾಡದ ಶ್ರೀನಗರ 1ನೇ ಕ್ರಾಸ್ನ ಮನೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯನ್ನು ಶ್ವೇತಾ ಗುದಗಾಪುರ (24) ಎಂದು ಗುರುತಿಸಲಾಗಿದೆ.
ರಾಮದುರ್ಗ ಮೂಲದ ಶ್ವೇತಾ ಪತಿಯನ್ನು ಬಿಟ್ಟು ಧಾರವಾಡಕ್ಕೆ ಬಂದು ಕಳೆದ ಒಂದು ವರ್ಷದಿಂದ ವಾಸವಾಗಿದ್ದರು. ರಾಮದುರ್ಗದ ವಿಶ್ವನಾಥ ಜೊತೆಗೆ ಐದು ವರ್ಷದ ಹಿಂದೆಯೇ ಶ್ವೇತಾಗೆ ಮದುವೆಯಾಗಿತ್ತು. ಕಳೆದ ಎರಡು ವರ್ಷದಿಂದ ಈಕೆ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಳು.
ಇನ್ನೂ ಪ್ರಾಥಮಿಕ ತನಿಖೆಯಲ್ಲಿ ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿ ಜತೆಗೆ ಶ್ವೇತ ಪ್ರೀತಿಯಲ್ಲಿ ಬಿದ್ದಿದ್ದರು. ಬಳಿಕ ಪತಿಗೆ ಡೈವರ್ಸ್ ನೋಟಿಸ್ ಕಳುಹಿಸಿದ್ದರು. ಇನ್ಸ್ಟ್ರಾಗ್ರಾಮ್ನಲ್ಲಿ ಈಕೆಗೆ ಯುವಕ ಪರಿಚಯವಾಗಿದ್ದ. ಯುವಕನೊಂದಿಗಿನ ಪರಿಚಯ ಪ್ರೀತಿಗೆ ತಿರುಗಿತ್ತು.
ಯುವಕನ ನಂಬಿ ಪತಿ ಬಿಟ್ಟು ಶ್ವೇತಾ ಬಂದಿದ್ದರು. ಧಾರವಾಡದ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗೆ ಓದಿಕೊಳ್ಳೋದಾಗಿ ಬಾಡಿಗೆ ಮನೆಯಲ್ಲಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.