Publish Date: Wed, 09 Jan 2019 (14:36 IST)
Updated Date: Wed, 09 Jan 2019 (14:39 IST)
ತರಕಾರಿ ವ್ಯಾಪಾರಿಯೊಬ್ಬನ ಮೇಲೆ ದಾಳಿ ನಡೆಸಿರುವ ಪೊಲೀಸರು ಆತನಿಂದ 4 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರಿನಲ್ಲಿ ಸಂಚರಿಸುತ್ತ ಗಾಂಜಾ ಮಾರಾಟ ಮಾಡುತ್ತಿದ್ದ ತರಕಾರಿ ವ್ಯಾಪಾರಿಯೊಬ್ಬನನ್ನು ಬಂಧಿಸಿರುವ ಸುದ್ದಗುಂಟೆ ಪಾಳ್ಯ ಪೊಲೀಸರು 4 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಮಡಿವಾಳದ ಸಿದ್ದಾರ್ಥ ನಗರದ ಮಂಜುನಾಥ (32) ಬಂಧಿತ ಆರೋಪಿ. ಬಂಧಿತನಿಂದ 1 ಲಕ್ಷ ಮೌಲ್ಯದ 4 ಕೆಜಿ ಗಾಂಜಾ, ಹೋಂಡಾ ಸಿಟಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
ಆರೋಪಿಯು ಮೈಸೂರಿನ ಸ್ನೇಹಿತ ಆನಂದ್ ಎಂಬಾತನಿಂದ ಗಾಂಜಾ ಖರೀದಿಸಿಕೊಂಡು ಬಂದು ಬಿಸ್ಮಿಲ್ಲಾ ನಗರ, ಬಿಜಿ ರೋಡ್, ಬಿಇಟಿ ಕಾಲೇಜು ಇನ್ನಿತರ ಕಡೆಗಳಲ್ಲಿ ಹೋಂಡಾಸಿಟಿ ಕಾರಿನಲ್ಲಿ ಸಂಚರಿಸುತ್ತ ಮಾರಾಟ ಮಾಡುತ್ತಿದ್ದ. ಆರೋಪಿಯು ಮಡಿವಾಳದಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದು, ತಾಯಿಯನ್ನು ಅಂಗಡಿಯಲ್ಲಿ ಬಿಟ್ಟು ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದು, ಇದೇ ಮೊದಲ ಬಾರಿಗೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.