Publish Date: Thu, 01 Sep 2022 (16:36 IST)
Updated Date: Thu, 01 Sep 2022 (16:46 IST)
ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುರಿತು ಮಾಹಿತಿ ನೀಡಿದವರಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಭಾರತದ ಭಯೋತ್ಪಾದಕ ನಿಗ್ರಹ ದಳ ಘೋಷಿಸಿದ್ದು, ಮುಂಬೈ ಸ್ಫೋಟ ರೂವಾರಿಗಳ ನೂತನ ಫೋಟೊಗಳನ್ನು ಬಿಡುಗಡೆಗೊಳಿಸಿದೆ.
ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ ಐಎ), ದಾವೂದ್ ಇಬ್ರಾಹಿಂ ಗ್ಯಾಂಗ್ ನ ಕಿಂಗ್ ಪಿನ್ ಛೋಟಾ ಶಕೀಲ್ ಹಾಗೂ ಇತರ ಉಗ್ರರಾದ ಅನೀಸ್ ಇಬ್ರಾಹಿಂ, ಜಾವೇದ್ ಚಿಕ್ನಾ, ಟೈಗರ್ ಮೆಮೊನ್ ವಿರುದ್ಧ ತಲಾ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಇತರ ನಟೋರಿಯಸ್ ಉಗ್ರರು ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಎ ತೊಯ್ಬಾ, ಜೈಶ್ ಎ ಮೊಹಮ್ಮದ್, ಅಲ್ ಖೈದಾ ಜೊತೆ ಕೈಜೋಡಿಸುವ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಎನ್ ಐಎ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ದಾವೂದ್ ಇಬ್ರಾಹಿಂ 1993ರಲ್ಲಿ ವಾಣಿಜ್ಯ ನಗರಿ ಮುಂಬೈನ ವಿವಿಧೆಡೆ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟದ ರೂವಾರಿಯಾಗಿದ್ದಾನೆ. ಅಂದು ಸಂಭವಿಸಿದ್ದ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿದ್ದು, 700ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಘಟನೆ ಬಳಿಕ ದಾವೂದ್ ಇಬ್ರಾಹಿಂನನ್ನು ಅಂತರಾಷ್ಟ್ರೀಯ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಘೋಷಿಸಿತ್ತು.
geetha
Publish Date: Thu, 01 Sep 2022 (16:36 IST)
Updated Date: Thu, 01 Sep 2022 (16:46 IST)