ಬೆಂಗಳೂರು: ಕಾಂತಾರ ಸಿನಿಮಾದಲ್ಲಿ ನಾಯಕ ಶಿವನ ಸ್ನೇಹಿತ ರಾಂಪನಾಗಿ ಪಾತ್ರ ಮಾಡಿರುವ ಪ್ರಕಾಶ್ ತುಮಿನಾಡ್ ಈಗ ಕನ್ನಡ ಜನಪ್ರಿಯ ಹಾಸ್ಯ ಕಲಾವಿದರಾಗುತ್ತಿದ್ದಾರೆ.
ಕಾಸರಗೋಡು ಸಿನಿಮಾದಲ್ಲಿ ಭುಜಂಗನ ಪಾತ್ರ ಮಾಡಿ ಪಾಪ್ಯುಲರ್ ಆಗಿದ್ದ ಪ್ರಕಾಶ್ ತುಮಿನಾಡ್ ಮೂಲತಃ ಗಡಿನಾಡು ಮಂಜೇಶ್ವರದವರು. ರಂಗಭೂಮಿ ಕಲಾವಿದರಾಗಿದ್ದ ಪ್ರಕಾಶ್ ತುಮಿನಾಡ್ ರಂಗಭೂಮಿಯಲ್ಲಿದ್ದಾಗ ನಟನೆ ಜೊತೆಗೆ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದರು.
ಒಂದು ಮೊಟ್ಟೆಯ ಕತೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದ ಪ್ರಕಾಶ್ ತುಮಿನಾಡ್ ಇದುವರೆಗೆ ಒಂಭತ್ತು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಎಲ್ಲಾ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಅವರ ಡೈಲಾಗ್ ಡೆಲಿವರಿ ಮಾಡುವ ಶೈಲಿಯಿಂದ ಗಮನ ಸೆಳೆದಿದ್ದಾರೆ. ಕಾಂತಾರ ಸಿನಿಮಾ ಬಳಿಕ ಅವರ ಪಾಪ್ಯುಲಾರಿಟಿ ಮತ್ತಷ್ಟು ಹೆಚ್ಚಾಗಿದ್ದು, ಮುಂದೆ ಕನ್ನಡ ಸಿನಿಮಾಗಳಲ್ಲಿ ಮತ್ತಷ್ಟು ಪಾತ್ರಗಳನ್ನು ಪಡೆಯುವ ಭರವಸೆ ಮೂಡಿಸಿದ್ದಾರೆ.