Publish Date: Fri, 13 Oct 2023 (09:20 IST)
Updated Date: Fri, 13 Oct 2023 (09:32 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಕಬ್ಜ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಶಿವಣ್ಣ ಚಿತ್ರತಂಡದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಶಿವಣ್ಣ ನಾಯಕರಾಗಿರುವ ಘೋಸ್ಟ್ ಸಿನಿಮಾ ಹಿಂದಿಯಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಬೆನ್ನಲ್ಲೇ ಅಸಮಾಧಾನ ಹೊರಹಾಕಿದ್ದಾರೆ. ಕಬ್ಜ ಬಳಿಕ ನಮ್ಮ ಸಿನಿಮಾವನ್ನು ಹಿಂದಿಗೆ ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತಿದೆ. ಚಂದ್ರು ಮೇಲೆ ನನಗೆ ದೂರಿಲ್ಲ, ಆದರೂ ಕಬ್ಜನಲ್ಲಿ ನನ್ನ ಪಾತ್ರವನ್ನು ಹೈಲೈಟ್ ಮಾಡಿ ತಪ್ಪು ಮಾಡಿದರು. ಜೈಲರ್ ಸಿನಿಮಾದಲ್ಲಿ ನನ್ನದು ಅತಿಥಿ ಪಾತ್ರ. ಅಲ್ಲಿ ಎಷ್ಟು ಬೇಕೋ ಅಷ್ಟು ತೋರಿಸಿದರು. ಆದರೆ ಕಬ್ಜದಲ್ಲಿ ನನ್ನದು ಅತಿಥಿ ಪಾತ್ರವಾದರೂ ಹೈಲೈಟ್ ಮಾಡಿಬಿಟ್ಟರು.
ನಾನು ಉಪೇಂದ್ರ, ಸುದೀಪ್ ನಟಿಸಿದ್ದಾರೆ ಎಂದು ನಟಿಸಲು ಒಪ್ಪಿಕೊಂಡೆ. ಆದರೆ ನನ್ನನ್ನೂ ಹೈಲೈಟ್ ಮಾಡಿ ಸಿನಿಮಾ ಕೊಳ್ಳುವವರನ್ನು ಮಿಸ್ ಲೀಡ್ ಮಾಡಿದರು. ಸಿನಿಮಾ ಬಿಡುಗಡೆಯಾದಾಗ ತಮಿಳುನಾಡಿನಲ್ಲಿ ಶೂಟಿಂಗ್ ನಲ್ಲಿದ್ದೆ. ವಾಪಸ್ ಬರುವಾಗ ಯಾರೋ ಒಬ್ಬರು ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದೆವು. ಆದರೆ ನಿರಾಸೆಯಾಯಿತು. ನೀವು ಬರೀ ಒಂದು ಸೀನ್ ನಲ್ಲಿ ಬಂದು ಹೋಗುತ್ತೀರಿ ಎಂದರು. ನನಗೆ ಯಾಕೋ ಸರಿ ಬರಲಿಲ್ಲ. ಅತಿಥಿ ಪಾತ್ರಗಳನ್ನು ಜಾಣತನದಿಂದ ಬಳಸಿಕೊಳ್ಳಬೇಕು. ಅತಿಥಿ ಪಾತ್ರಗಳ ಕಟೌಟ್ ಹಾಕಿ ಪ್ರಚಾರ ಮಾಡಿ ಮಿಸ್ ಲೀಡ್ ಮಾಡಬಾರದು ಎಂದಿದ್ದಾರೆ ಶಿವಣ್ಣ.