Publish Date: Fri, 06 Oct 2023 (09:35 IST)
Updated Date: Fri, 06 Oct 2023 (09:37 IST)
ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ಗಳಾದ ದರ್ಶನ್ ಮತ್ತು ಧ್ರುವ ಸರ್ಜಾ ನಡುವೆ ಮನಸ್ತಾಪವಿದೆ ಎಂಬ ವರದಿಗಳ ಬೆನ್ನಲ್ಲೇ ಹುಟ್ಟುಹಬ್ಬದ ಸಂದರ್ಭದಲ್ಲಿ ಧ್ರುವ ಈ ಬಗ್ಗೆ ಮಾತನಾಡಿದ್ದಾರೆ.
ಇಂದು ಧ್ರುವ ಸರ್ಜಾ ಹುಟ್ಟುಹಬ್ಬವಿದೆ. ಜೊತೆಗೆ ಅಣ್ಣ ಚಿರು ಸರ್ಜಾ ಕೊನೆಯ ಸಿನಿಮಾ ರಾಜಮಾರ್ತಂಡ ಬಿಡುಗಡೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ದರ್ಶನ್ ಮತ್ತು ಧ್ರುವ ನಡುವೆ ಮನಸ್ತಾಪವಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಕಾವೇರಿ ಹೋರಾಟದ ಸಂದರ್ಭದಲ್ಲಿ ಎದಿರುಬದುರಾದರೂ ಇಬ್ಬರೂ ಮುಖ ಕೊಟ್ಟು ಮಾತನಾಡಿರಲಿಲ್ಲ. ಇದು ಎಲ್ಲರ ಗಮನ ಸೆಳೆದಿತ್ತು.
ಈ ನಡುವೆ ದರ್ಶನ್ ಮತ್ತು ಧ್ರುವ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಇದೀಗ ಮನಸ್ತಾಪದ ಬಗ್ಗೆ ಮಾತನಾಡಿರುವ ಧ್ರುವ ದರ್ಶನ್ ನಮ್ಮ ಹಿರಿಯ ನಟ, ನಮ್ಮ ಸೀನಿಯರ್ ಕೂಡಾ ಹೌದು. ದರ್ಶನ್ ಬಳಿ ಕೇಳಲು ನನಗೆ ಕೆಲವು ಪ್ರಶ್ನೆಗಳಿವೆ. ಇದನ್ನು ಅವರ ಬಳಿಯೇ ಕೇಳಬೇಕಿದೆ. ನಾನು ಅವರೊಟ್ಟಿಗೆ ಈ ವಿಚಾರವಾಗಿ ಮಾತನಾಡುತ್ತೇನೆ. ನನಗೂ ಸ್ವಾಭಿಮಾನವಿದೆ. ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ನಾಟಕೀಯವಾಗಿರಲು ಬರಲ್ಲ. ನನಗೆ ಕೆಲವು ಗೊಂದಲಗಳಿವೆ. ಅದರ ಬಗ್ಗೆ ದರ್ಶನ್ ಬಳಿಯೇ ಪ್ರಶ್ನೆ ಮಾಡುತ್ತೇನೆ ಎಂದಿದ್ದಾರೆ.