Publish Date: Wed, 11 Oct 2023 (09:00 IST)
Updated Date: Wed, 11 Oct 2023 (09:13 IST)
ಬೆಂಗಳೂರು: Chef ಚಿದಂಬರನ ನಳಪಾಕ ರೆಡಿಯಾಗಿದೆ. ಆದರೆ ಜನರಿಗೆ ಉಣಬಡಿಸುವ ಮೊದಲು ಒಗ್ಗರಣೆ ಹಾಕಬೇಕಿದೆ. ಇದಕ್ಕೆ ಒಂದಷ್ಟು ಸಮಯ ಹಿಡಿಯಲಿದೆ.
ಅನಿರುದ್ಧ್ ಜತ್ಕಾರ್ ನಾಯಕರಾಗಿರುವ ರಾಘು ಸಿನಿಮಾ ಖ್ಯಾತಿಯ ನಿರ್ದೇಶಕ ಆನಂದ್ ರಾಜ್ ನಿರ್ದೇಶಿಸಿರುವ Chef ಚಿದಂಬಂರ ಸಿನಿಮಾ ಶೂಟಿಂಗ್ ಮುಕ್ತಾಯವಾಗಿರುವುದಾಗಿ ಚಿತ್ರತಂಡ ಘೋಷಿಸಿದೆ. ಕೇವಲ 29 ದಿನಗಳಲ್ಲಿ ಶೂಟಿಂಗ್ ಮುಕ್ತಾಯವಾಗಿದೆ. ಮುಂದೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿಯಿವೆ. ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿದ್ದು, ಇದಕ್ಕೆ ಮೊದಲು ನಿರ್ದೇಶಕ ಆನಂದ್ ರಾಜ್ ಇಂತಹದ್ದೇ ಸಿನಿಮಾ ಮಾಡಿ ಗೆದ್ದಿದ್ದರು. ಇದೀಗ ಕೊಂಚ ವಿಭಿನ್ನ ಶೈಲಿಯ ಸಸ್ಪೆನ್ಸ್ ಥ್ರಿಲ್ಲರ್ ಕತೆಯೊಂದಿಗೆ ಜನರ ಮುಂದೆ ಬರುತ್ತಿದ್ದಾರೆ. ಸಿನಿಮಾದಲ್ಲಿ ಅನಿರುದ್ಧ್ ಜತ್ಕಾರ್ ಗೆ ಜೋಡಿಯಾಗಿ ರಾಚೆಲ್ ಡೇವಿಡ್ ಮತ್ತು ನಿಧಿ ಸುಬ್ಬಯ್ಯ ಅಭಿನಯಿಸಿದ್ದಾರೆ.