Publish Date: Tue, 24 Feb 2026 (13:18 IST)
Updated Date: Tue, 24 Feb 2026 (13:22 IST)
ಬೆಂಗಳೂರು: ಬಾಲಿವುಡ್, ಟಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು, ಉದ್ಯಮಿಗಳು ಉದಯಪುರದಲ್ಲೇ ಮದುವೆಯಾಗುತ್ತಾರೆ. ಅಷ್ಟಕ್ಕೂ ಸೆಲೆಬ್ರಿಟಿಗಳು ಉದಯಪುರದಲ್ಲೇ ಮದುವೆಯಾಗುವುದು ಯಾಕೆ, ಕಾರಣ ಇಲ್ಲಿದೆ.
ಉದಯಪುರದಲ್ಲಿ ಮದುವೆಯಾಗುತ್ತಿರುವ ಸೆಲೆಬ್ರಿಟಿಗಳ ಲಿಸ್ಟ್ ಗೆ ಲೇಟೆಸ್ಟ್ ಆಗಿ ಸೇರ್ಪಡೆಯಾಗುತ್ತಿರುವುದು ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ. ಇಬ್ಬರೂ ಫೆಬ್ರವರಿ 26 ರಂದು ಉದಯಪುರದಲ್ಲಿ ತೀರಾ ಖಾಸಗಿಯಾಗಿ ಆಪ್ತರ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ. ಈ ಮದುವೆಯ ಫೋಟೋಗಳು ಎಲ್ಲೂ ಲೀಕ್ ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.
ಈ ಹಿಂದೆ ನಟ ರಣಬೀರ್ ಕಪೂರ್-ಅಲಿಯಾ ಭಟ್, ಪರಿಣಿತಿ ಚೋಪ್ರಾ-ರಾಘವ್ ಛಡ್ಡಾ, ಇಶಾ ಅಂಬಾನಿ-ಆನಂದ್ ಪಿರಾಮಿಲ್ ಸೇರಿದಂತೆ ಬಹುತೇಕ ಸೆಲೆಬ್ರಿಟಿಗಳು ಉದಯಪುರದಲ್ಲೇ ಮದುವೆಯಾಗಿದ್ದಾರೆ. ಇಲ್ಲಿ ಸೆಲೆಬ್ರಿಟಿಗಳಿಗೆಂದೇ ಐಷಾರಾಮಿ ಮದುವೆ ಮಂಟಪಗಳಿವೆ.
ತಾಜ್ ಲೇಕ್ ಪ್ಯಾಲೇಸ್, ದಿ ಓಬೇರಾಯ್ ಉದಯ್ ವಿಲಾಸ್, ಜಗಮಂದಿರ್ ಐಸ್ ಲ್ಯಾಂಡ್ ಪ್ಯಾಲೇಸ್, ಲೀಲಾ ಪ್ಯಾಲೇಸ್ ಎಂಬಿತ್ಯಾದಿ ಐಷಾರಾಮಿ ವಿವಾಹಕ್ಕೆಂದೇ ಮೀಸಲಾಗಿರುವ ಸ್ಥಳಗಳಿವೆ. ಇಲ್ಲಿನ ರಾಯಲ್ ರೆಸಿಡೆನ್ಸಿಗಳು, ಅರಾವಳಿ ಬೆಟ್ಟದ ಹಿನ್ನಲೆ, ಸರೋವರ ಜೊತೆಗೆ ಉಳಿದುಕೊಳ್ಳಲು ಐಷಾರಾಮಿ ರೂಂಗಳು. ಇವೆಲ್ಲವೂ ಸೆಲೆಬ್ರಿಟಿಗಳ ರಾಯಲ್ ಮದುವೆಯ ಕನಸಿಗೆ ಜೀವ ತುಂಬುತ್ತವೆ.
ಇದರ ಜೊತೆಗೆ ಸೆಲೆಬ್ರಿಟಿಗಳು ತಮ್ಮ ಮದುವೆಯನ್ನು ಖಾಸಗಿಯಾಗಿಡಲು ಬಯಸುತ್ತಿದ್ದರೆ ಅದಕ್ಕೂ ಇದು ಸೂಕ್ತ ತಾಣ. ಇಲ್ಲಿ ಒಳಗೆಲ್ಲೂ ಪಪ್ಪಾರಾಜಿಗಳ ಕಾಟವೇ ಇರಲ್ಲ. ಹೀಗಾಗಿ ಮದುವೆ ದೃಶ್ಯಗಳು ಲೀಕ್ ಆಗುವ ಭಯವೂ ಇಲ್ಲ. ಅಲ್ಲದೆ ಇಲ್ಲಿಗೆ ಬರುವ ಗಣ್ಯ ಅತಿಥಿಗಳೂ ಸಾರ್ವಜನಿಕರ ಕೈಗೆ ಸಿಗದೇ ತಮ್ಮ ಪ್ರೈವೆಸಿಯಲ್ಲಿರಲು ಅವಕಾಶವಿದೆ. ಇಲ್ಲಿಗೆ ಹತ್ತಿರದಲ್ಲೇ ವಿಮಾನ ನಿಲ್ದಾಣವೂ ಇದ್ದು ಸೆಲೆಬ್ರಿಟಿ ಅತಿಥಿಗಳಿಗೆ ಅನುಕೂಲವಾಗುತ್ತದೆ.
ಈ ಮದುವೆ ತಾಣಗಳ ಬಾಡಿಗೆ ದಿನವೊಂದಕ್ಕೆ ಕನಿಷ್ಠ ಎಂದರೂ 2 ರಿಂದ 3 ಕೋಟಿ ರೂ.ಗಳಷ್ಟಿದೆ. ಒಂದೊಂದು ತಾಣಕ್ಕೆ ಒಂದೊಂದು ದರ ನಿಗದಿಯಾಗಿರುತ್ತದೆ. ಹೀಗಾಗಿ ಇಲ್ಲಿ ಸಾಮಾನ್ಯರಿಗೆ ಮದುವೆಯಾಗುವುದು ಕನಸಿನ ಮಾತು.