Publish Date: Mon, 15 Jun 2020 (09:00 IST)
Updated Date: Mon, 15 Jun 2020 (09:01 IST)
ಬೆಂಗಳೂರು: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮಾನಸಿನ ಖಿನ್ನತೆಗೊಳಗಾಗಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೇ ಸ್ಯಾಂಡಲ್ ವುಡ್ ನಟ-ನಟಿಯರೂ ಬೇಸರ ವ್ಯಕ್ತಪಡಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಈ ನಡುವೆ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಮಾನಸಿಕ ಖಿನ್ನತೆ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು ಹಿಂದೊಮ್ಮೆ ತಾವೂ ಈ ಪರಿಸ್ಥಿತಿ ಎದುರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಈ ಮಾನಸಿಕ ಪರಿಸ್ಥಿತಿಯಿಂದ ಹೊರಬರಬೇಕಾದರೆ ನಮ್ಮ ಮನಸ್ಸಿನ ದುಃಖವನ್ನು ಇತರರೊಡನೆ ಹಂಚಿಕೊಂಡು ಹಗುರವಾಗುವುದೇ ಉತ್ತಮ ಎಂದಿದ್ದಾರೆ.
ಮಾನಸಿಕ ಖಿನ್ನತೆ ಬಗ್ಗೆ ನಾವು ನಾಚಿಕೆ ಪಟ್ಟುಕೊಂಡು ಯಾರೊಂದಿಗೂ ನಮ್ಮ ಮನಸ್ಸಿನ ದುಃಖ ಹಂಚಿಕೊಳ್ಳದೇ ಇದ್ದರೆ ಅಪಾಯ. ನಾನೂ ಹಿಂದೊಮ್ಮೆ ಡಿಪ್ರೆಷನ್ ಗೊಳಗಾಗಿದ್ದೆ. ಆಗ ನನ್ನ ಆಪ್ತರ ಬಳಿ ನನ್ನ ಕಷ್ಟ ಹಂಚಿಕೊಂಡೆ. ಇದರಿಂದ ಹಗುರವಾದೆ. ಈಗ ನಾನು ಹಿಂದೆಗಿಂತಲೂ ಹೆಚ್ಚು ಉತ್ಸಾಹದಲ್ಲಿ ಜೀವನ ನಡೆಸುತ್ತಿದ್ದೇನೆ. ಯಾರೂ ಇದರ ಬಗ್ಗೆ ಕೀಳರಿಮೆ ಪಟ್ಟುಕೊಳ್ಳಬಾರದು ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ.