Select Your Language

Notifications

webdunia
webdunia
webdunia
webdunia

‘ಎಂದೆಂದಿಗೂ ನನ್ನ ಚಿರು’! ಅಗಲಿದ ಪತಿಯ ಬಗ್ಗೆ ಸುದೀರ್ಘ ಸಂದೇಶ ಬರೆದುಕೊಂಡ ಮೇಘನಾ ರಾಜ್

‘ಎಂದೆಂದಿಗೂ ನನ್ನ ಚಿರು’! ಅಗಲಿದ ಪತಿಯ ಬಗ್ಗೆ ಸುದೀರ್ಘ ಸಂದೇಶ ಬರೆದುಕೊಂಡ ಮೇಘನಾ ರಾಜ್
ಬೆಂಗಳೂರು , ಗುರುವಾರ, 18 ಜೂನ್ 2020 (10:47 IST)
ಬೆಂಗಳೂರು: ಚಿರಂಜೀವಿ ಸರ್ಜಾ ಸಾವಿಗೀಡಾಗಿ ಇಂದಿಗೆ 12 ದಿನ. ಅವರ ಹನ್ನೊಂದನೇ ದಿನದ ಕಾರ್ಯಗಳೆಲ್ಲಾ ಮುಗಿದ ಮೇಲೆ ಇದೀಗ ಪತ್ನಿ ಮೇಘನಾ ಸರ್ಜಾ ಪತಿಯ ಅಗಲುವಿಕೆಯ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಇದನ್ನು ಓದುತ್ತಿದ್ದರೆ, ಎಂಥವರೇ ಆದರೂ ಕ್ಷಣ ಕಾಲ ಭಾವುಕರಾಗುತ್ತಾರೆ!


ಎಂದೆಂದಿಗೂ ನನ್ನ ಚಿರು ಎಂದು ಅಡಿಬರಹದಲ್ಲಿ ಮೇಘನಾ ಪತಿಗೆ ಒಲವಿನ ಓಲೆ ಬರೆದಿದ್ದಾರೆ. ನನ್ನ ಕೊನೆಯ ಉಸಿರುವವರೆಗೂ ನೀವು ನನ್ನೊಳಗೆ ಜೀವಂತವಾಗಿರುತ್ತೀರಿ ಎಂದಿದ್ದಾರೆ. ಆ ಪತ್ರದ ಸಾರಾಂಶ ಹೀಗಿದೆ ನೋಡಿ.

‘ಚಿರು, ನಾನು ತುಂಬಾ, ತುಂಬಾ ಪ್ರಯತ್ನಪಟ್ಟೆ. ಆದರೂ ನಿನಗೆ ಏನು ಹೇಳಬೇಕೆಂಬುದನ್ನು ಬರೆಯಲು ಸಾಧ‍್ಯವಾಗುತ್ತಿಲ್ಲ. ನೀನು ಎಂದರೆ ನನಗೆ ಏನು ಎಂಬುದನ್ನು ವಿವರಿಸಲು ಈ ಜಗತ್ತಿನಲ್ಲಿರುವ ಯಾವ ಪದಗಳೂ ಸಾಲದು. ನೀನು ನನ್ನ ಗೆಳೆಯ, ಲವ್ವರ್, ಸಹಭಾಗಿ, ಮಗು, ಆತ್ಮವಿಶ್ವಾಸ, ನನ್ನ ಪತಿ- ನೀನು ನನಗೆ ಇದೆಲ್ಲಕ್ಕಿಂತಲೂ ಹೆಚ್ಚಾಗಿದ್ದೆ. ನೀನು ನನ್ನ ಆತ್ಮದ ಭಾಗವಾಗಿದ್ದೆ ಚಿರು.

ನಾನು ಪ್ರತೀ ಬಾರಿ ಬಾಗಿಲ ಕಡೆಗೆ ನೋಡುವಾಗಲೂ ನೀನು ‘ನಾನು ಮನೆಗೆ ಬಂದೆ’ ಎಂದು ದೊಡ್ಡದಾಗಿ ಕೂಗಿ ಹೇಳುತ್ತಾ ಬರುತ್ತಿಲ್ಲ ಎಂಬ ನೋವು ನನ್ನನ್ನು ಚುಚ್ಚುತ್ತಿದೆ. ನಿನ್ನನ್ನು ಪ್ರತಿಕ್ಷಣವೂ ಸ್ಪರ್ಶಿಸಲಾಗದೇ ನನ್ನ ಎದೆಯೊಳಗೇ ಏನೋ ಮುಳುಗಿದ ಭಾವ. ಸಾವಿರ ಸಾವಿನ ಹಾಗೆ ನೋವು ತುಂಬಾ ದುಃಖಕರ ಮತ್ತು ನಿಧಾನವಾಗಿ ವಾಸಿಯಾಗುವಂತಹದ್ದು. ಆದರೆ, ಅದೇನೋ ಮಾಯಾಜಾಲದಂತೆ ನೀನು ನನ್ನೊಳಗೇ ಇರುವೆ. ಪ್ರತೀ ಬಾರಿ ನಾನು ದುರ್ಬಲಳಾದೆ ಎನಿಸಿದಾಗಲೆಲ್ಲಾ ನೀನು ರಕ್ಷಿಸುವ ದೇವ ಕುವರನಂತೆ ನನ್ನೊಳಗೇ ಬರುವೆ.

ನೀನು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದೆ ಎಂದರೆ, ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಲು ನಿನಗೆ ಸಾಧ‍್ಯವಾಗದು. ಅಲ್ಲವೇ? ನಮ್ಮ ಪುಟ್ಟ ಕಂದ ನೀನು ನನಗೆ ಕೊಟ್ಟ ಅದ್ಭುತ ಉಡುಗೊರೆ. ಅದು ನಮ್ಮ ಪ್ರೀತಿಯ ಸಂಕೇತ. ಮತ್ತು ಈ ಸಿಹಿಯಾದ ಅಚ್ಚರಿಗೆ ನಾನು ನಿನಗೆ ಚಿರಋಣಿ. ಅದನ್ನು ನಾನು ನಮ್ಮ ಮಗುವಾಗಿ ಈ ಭೂಮಿಗೆ ತರುವುದನ್ನು ಕಾಯುತ್ತಿರುವೆ. ಅದನ್ನು ಮತ್ತೆ ಕೈಯಲ್ಲಿ ಎತ್ತಿಕೊಳ್ಳುವುದಕ್ಕೆ ಕಾಯುತ್ತಿರುವೆ. ನಿನ್ನ ನಗುವನ್ನು ಅದರಲ್ಲಿ ನೋಡುವುದಕ್ಕೆ ಇನ್ನು ಹೆಚ್ಚು ಕಾಯಲಾರೆ. ಒಮ್ಮೆ ನಕ್ಕರೆ ಸುತ್ತಮುತ್ತಲು ಬೆಳಕು ಚೆಲ್ಲುವ ಆ ನಿನ್ನ ಸುಂದರ ನಗುವನ್ನು ಮತ್ತೆ ನೋಡಲು ಕಾಯುತ್ತಿರುವೆ. ನಾನು ನಿನಗಾಗಿ ಕಾಯುತ್ತಿರುವೆ ಮತ್ತು ನೀನು ಇನ್ನೊಂದು ಜಗತ್ತಿನಲ್ಲಿ ನನಗಾಗಿ ಕಾಯುತ್ತಿರು.

ನನ್ನ ಕೊನೆಯ ಉಸಿರುವವರೆಗೂ ನೀನು ಬದುಕಿರುವೆ. ನೀನು ನನ್ನೊಳಗೇ ಇರುವೆ. ಐ ಲವ್ ಯೂ’

ಹೀಗೆಂದು ಮೇಘನಾ ಸುದೀರ್ಘವಾಗಿ ತಮ್ಮ ಪತಿಗೆ ಮನದಾಳದ ಮಾತುಗಳನ್ನು ಬರೆದುಕೊಂಡು ದುಃಖ ಮರೆಯುವ ಪ್ರಯತ್ನ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ನಾಗಶೇಖರ್ ತಮಾಷೆ ಮಾಡಲು ಹೋಗಿ ವಿವಾದಕ್ಕೊಳಗಾದ ನಾಗತಿಹಳ್ಳಿ ಚಂದ್ರಶೇಖರ್