ಬೆಂಗಳೂರು: ಅತ್ಯಾಚಾರ ಆರೋಪಕ್ಕೆ ಒಳಗಾಗಿರುವ ನಟ ಮಡೆನೂರು ಮನು ಮೊನ್ನೆಯಷ್ಟೇ ಶಿವಣ್ಣನ ಮನೆಗೆ ಕ್ಷಮೆ ಕೇಳಲು ಹೋಗಿ ಗೇಟ್ ಕೂಡಾ ತೆರೆಯದ ಕಾರಣ ವಾಪಸ್ ಆದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ನಿಜಾಂಶವೇನೆಂದು ಸ್ವತಃ ಮಡೆನೂರು ಮನು ಈಗ ಹೇಳಿಕೊಂಡಿದ್ದಾರೆ. ಅತ್ಯಾಚಾರ ಆರೋಪದಲ್ಲಿ ಮಡೆನೂರು ಬಂಧನವಾದ ಬೆನ್ನಲ್ಲೇ ಅವರದ್ದು ಎನ್ನಲಾದ ಅಡಿಯೋ ಒಂದು ವೈರಲ್ ಆಗಿತ್ತು. ಇದರಲ್ಲಿ ಶಿವಣ್ಣ ಇನ್ನು ಕೆಲವೇ ದಿನ ಸತ್ತೋಗ್ತಾರೆ ಎಂದು ಆಕ್ಷೇಪಾರ್ಹವಾಗಿ ಮನು ಹೇಳಿದ್ದರು. ಇದರ ಬೆನ್ನಲ್ಲೇ ಚಲನಚಿತ್ರ ವಾಣಿಜ್ಯ ಮಂಡಳಿ ಅವರನ್ನು ಬ್ಯಾನ್ ಮಾಡಿತ್ತು.
ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮನು ಕ್ಷಮೆ ಕೇಳಲು ಶಿವಣ್ಣ ಮನೆಗೆ ಹೋಗಿದ್ದರೆಂದು ಹೇಳಲಾದ ವಿಡಿಯೋ ವೈರಲ್ ಆಗಿತ್ತು. ಆದರೆ ಈ ವಿಡಿಯೋ ಹಳೆಯದ್ದು. ನಾನು ಶಿವಣ್ಣನ ಮನೆಗೆ ಹೋದಾಗ ಅವರು ಅಲ್ಲಿರಲಿಲ್ಲ. ಹೀಗಾಗಿ ಅವರು ಇಲ್ಲ ಅಂತ ವಾಪಸ್ ಆಗಿದ್ದೆ ಅಷ್ಟೇ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದಾರೆ.
ಚಿತ್ರರಂಗದಿಂದ ನಿಷೇಧವಾದ ಬಳಿಕ ಇದೀಗ ತಮ್ಮ ಮೇಲಿನ ನಿಷೇಧ ಹಿಂತೆಗೆಯಲು ಮಡೆನೂರು ಮನು ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಶಿವಣ್ಣ, ದರ್ಶನ್, ಧ್ರುವ ಸರ್ಜಾ ಬಳಿ ಸೋಷಿಯಲ್ ಮೀಡಿಯಾದಲ್ಲೇ ಕ್ಷಮೆ ಯಾಚಿಸಿದ್ದಾರೆ.