ಬೆಂಗಳೂರು: ತಮ್ಮ ಹೇಳಿಕೆಗಳ ಮೂಲಕವೇ ಸದ್ದು ಮಾಡಿ, ಬಿಗ್ಬಾಸ್ ಸೀಸನ್ 11ರ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಅವರು ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸುಮಾರು 93 ದಿನಗಳ ಬಳಿಕ ಜಗದೀಶ್ ಜೈಲಿನಿಂದ ರಿಲೀಸ್ ಆಗಿದ್ದಾರೆ.
ಕೊಡಿಗೆಹಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಯರ್ ಜಗದೀಶ್ ಹಾಗೂ ಗನ್ ಮ್ಯಾನ್ನನ್ನು ಜನವರಿ 25ರಂದು ಪೊಲೀಸರು ಅರೆಸ್ಟ್ ಮಾಡಿದ್ದರು. ರಸ್ತೆಯಲ್ಲಿ ಅಣ್ಣಮ್ಮ ದೇವಿ ಕೂರಿಸಲು ವಿರೋಧಿಸಿದ್ದಕ್ಕೆ ಜಗದೀಶ್ ಮತ್ತು ಸ್ಥಳೀಯರ ನಡುವೆ ಜಗಳವಾಗಿತ್ತು. ಈ ಪ್ರಕರಣ ಸಂಬಂಧ ಅರೆಸ್ಟ್ ಆಗಿದ್ದ ಲಾಯರ್ ಜಗದೀಶ್ ಅವರು ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಹೊರಬರುತ್ತಿದ್ದ ಹಾಗೇ ಜಗದೀಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ಲಾಯರ್ ಜಗದೀಶ್ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ, ತಮಗೆ ಜಾಮೀನು ಸಿಕ್ಕಿರುವುದಾಗಿ ಹೇಳಿದ್ದಾರೆ. ನಾನು ಹಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಧೀರ ಹೋರಾಟ ನಡೆಸುತ್ತಿರುವ ಹೋರಾಟಗಾರ ಎಂದಿರುವ ಜಗದೀಶ್, PSI ಹಗರಣವನ್ನು ಬಯಲು ಮಾಡಿದ್ದು, ADGP ಅಮೃತಪಾಲ್ ಅವರನ್ನು ಜೈಲಿಗೆ ಕಳಿಸಿದ್ದು ನಮ್ಮ ಟೀಂ, ದೊಡ್ಡ ರಾಜಕಾರಣಿಗಳ ಸೆಕ್ಸ್ ಸ್ಕ್ಯಾಂಡಲ್ನ್ನು ಬಹಿರಂಗಪಡಿಸಿದ್ದು , ರವಿ ಚೆನ್ನಣ್ಣನವರ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದು , ಟ್ರಾಫಿಕ್ ಟೋವಿಂಗ್ ಸಿಸ್ಟಂ ಅನ್ನು ನಿಲ್ಲಿಸಿದ್ದು , ಕೊಡಿಗೆಹಳ್ಳಿ ಸುತ್ತಮುತ್ತ ಡ್ರಗ್ಸ್ ವಿರುದ್ಧ ಹೋರಾಟ ನಡೆಸಿದ್ಧು ... ಇವೆಲ್ಲವೂ ನನ್ನ ಹೋರಾಟದ ಭಾಗ.
ಈ ಧೈರ್ಯದ ಹೋರಾಟವನ್ನು ಸಹಿಸದ ಭ್ರಷ್ಟ ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆ, ನನ್ನ ಮತ್ತು ನನ್ನ ಮಗನ ವಿರುದ್ಧ ಸಂಚು ರೂಪಿಸಿ, 25/01/2025 ರಂದು ಸ್ಥಳೀಯ ಪುಂಡರಿಂದ ನನಗೆ ಮಾರಣಾಂತಿಕ ಹಲ್ಲೆ ನಡೆಸಿ, ಅಕ್ರಮವಾಗಿ ಜೈಲಿಗೆ ಕಳುಹಿಸಲಾಗಿತ್ತು. ಇವತ್ತಿಗೆ 93 ದಿನಗಳ ನಂತರ ನನಗೆ ನ್ಯಾಯ ಸಿಕ್ಕಿದೆ. ಜಾಮೀನು ಲಭಿಸಿದೆ. ನ್ಯಾಯಕ್ಕಾಗಿ ನನ್ನ ಹೋರಾಟ ಇನ್ನೂ ಜೀವಂತವಿದೆ, ನಾನು ಶರಣಾಗುವುದಿಲ್ಲ ಎಂದು ಹೇಳಿದ್ದಾರೆ.