Publish Date: Thu, 13 Jun 2024 (16:15 IST)
Updated Date: Thu, 13 Jun 2024 (16:18 IST)
ಬೆಂಗಳೂರು: ಸ್ಯಾಂಡಲ್ ವುಡ್ ಈಗ ಒಂದಿಲ್ಲೊಂದು ವಿವಾದಗಳ ವಿಚಾರಕ್ಕೇ ಸುದ್ದಿಯಾಗುತ್ತಿರುವುದು ವಿಪರ್ಯಾಸ. ಕೆಲವು ಸಮಯದ ಹಿಂದೆ ನಟ ದುನಿಯಾ ವಿಜಯ್ ತಮ್ಮ ಮೊದಲ ಪತ್ನಿ ನಾಗರತ್ನ ವಿರುದ್ಧ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಶಾಂತಿನಗರದ ಕೌಟುಂಬಿಕ ಕೋರ್ಟ್ ತಳ್ಳಿ ಹಾಕಿದೆ.
ಕೆಲವು ವರ್ಷದ ಹಿಂದೆ ನಟ ದುನಿಯಾ ವಿಜಯ್ ದಾಂಪತ್ಯದಲ್ಲಿ ಬಿರುಗಾಳಿಯೆದ್ದಿತ್ತು. ಪತ್ನಿ ನಾಗರತ್ನ ಜೊತೆಗಿನ ಮನಸ್ತಾಪ ಬೀದಿಗೆ ಬಂದಿತ್ತು. ತನ್ನ ಪತ್ನಿ ತನ್ನನ್ನು ಮತ್ತು ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿದ್ದರು. ಪತ್ನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ವಿಜಯ್ ಮಾನಸಿಕ ಕ್ರೌರ್ಯ ಅಡಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಆದರೆ ಈಗ ಶಾಂತಿನಗರದ ಕೌಟುಂಬಿಕ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ. ದುನಿಯಾ ವಿಜಯ್ ಮಾಡಿದ ಆರೋಪಗಳಿಗೆ ಸಾಕ್ಷ್ಯ ಒದಗಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಕೋರ್ಟ್ ವಿಚ್ಛೇದನ ಅರ್ಜಿಯನ್ನು ತಳ್ಳಿ ಹಾಕಿದೆ. ಕಳೆದ ಕೆಲವು ವರ್ಷಗಳಿಂದ ಪತಿ-ಪತ್ನಿ ದೂರವಾಗಿದ್ದಾರೆ.
ದುನಿಯಾ ವಿಜಯ್ ಎರಡನೇ ಬಾರಿಗೆ 2016 ರಲ್ಲಿ ಕೀರ್ತಿ ಎಂಬವರ ಜೊತೆ ಮದುವೆಯಾಗಿದ್ದಾರೆ. ವಿಜಯ್ ಗೆ ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಆದರೆ ಇವರ ವಿಚ್ಛೇದನಕ್ಕೆ ಪತ್ನಿ ನಾಗರತ್ನ ಒಪ್ಪಿಗೆಯಿರಲಿಲ್ಲ. ಹೀಗಾಗಿ ಕೇಸ್ ಇನ್ನೂ ಇತ್ಯರ್ಥವಾಗಿಲ್ಲ.