ಬೆಂಗಳೂರು: ಬೆಂಗಳೂರು ಚಿತ್ರೋತ್ಸವದಲ್ಲಿ ಡಿಕೆ ಶಿವಕುಮಾರ್ ನಟ್ಟು, ಬೋಲ್ಟ್ ಹೇಳಿಕೆ ಈಗ ಭಾರೀ ಚರ್ಚೆಯಾಗುತ್ತಿದೆ. ಹಾಗಿದ್ದರೆ ಈ ಹಿಂದೆ ಕಾಂತಾರ, ಟಾಕ್ಸಿಕ್ ಸಿನಿಮಾ ಶೂಟಿಂಗ್ ಗೆ ಬೇಕೆಂದೇ ತೊಂದರೆ ನೀಡಲಾಯಿತೇ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಬೆಂಗಳೂರು ಚಿತ್ರೋತ್ಸವಕ್ಕೆ ಹಾಜರಾಗದ ಕಾರಣಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ಕಲಾವಿದರ ಮೇಲೆ ಸಿಟ್ಟಾಗಿದ್ದ ಡಿಕೆ ಶಿವಕುಮಾರ್, ಎಲ್ಲರೂ ಮುಂದೆ ನಮ್ಮ ಬಳಿಯೇ ಸಹಾಯ ಕೇಳಿಕೊಂಡು ಬರುತ್ತಾರೆ. ಎಲ್ಲರ ನಟ್ಟು ಬೋಲ್ಟ್ ಟೈಟ್ ಮಾಡೋದು ಹೇಗೆ ಎಂದು ನಮಗೆ ಗೊತ್ತಿದೆ ಎಂದಿದ್ದರು. ಅವರ ಹೇಳಿಕೆಗೆ ಈಗ ಚಿತ್ರರಂಗದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ವಿಶೇಷವಾಗಿ ಸುದೀಪ್, ಯಶ್ ಮುಂತಾದ ನಟರನ್ನು ಗುರಿಯಾಗಿಟ್ಟುಕೊಂಡೇ ಡಿಕೆಶಿ ಈ ಹೇಳಿಕೆ ನೀಡಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಟಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕೆ ಅರಣ್ಯ ಪ್ರದೇಶ ಬಳಸಲಾಗಿದೆ ಎಂದು ವಿವಾದವಾಗಿತ್ತು.
ಇದಾದ ಬಳಿಕ ರಿಷಭ್ ಶೆಟ್ಟಿ ನಾಯಕರಾಗಿರುವ ಕಾಂತಾರ ಚಾಪ್ಟರ್ 1 ಚಿತ್ರೀಕರಣಕ್ಕೂ ಇದೇ ರೀತಿ ಅಡ್ಡಿಯಾಗಿತ್ತು. ಹೀಗಾಗಿ ಈ ಎರಡು ಸಿನಿಮಾಗೆ ಅಡ್ಡಿಮಾಡಿದ್ದೂ ಕಾಂಗ್ರೆಸ್ ನೇತೃತ್ವದ ಮೇಕೆದಾಟು ಹೋರಾಟಕ್ಕೆ ಬೆಂಬಲ ನೀಡಲಿಲ್ಲ ಎಂಬ ಕಾರಣಕ್ಕಾ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.