ಬೆಂಗಳೂರು: ಇಶಾ ಫೌಂಡೇಷನ್ ನಲ್ಲಿ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಹಲವರು ಟೀಕೆ ಮಾಡುತ್ತಿರುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಯಾರು ಏನೇ ಹೇಳಲಿ, ನನ್ನ ನಂಬಿಕೆ ನನಗೆ ದೊಡ್ಡದು ಎಂದಿದ್ದಾರೆ.
ಡಿಕೆ ಶಿವಕುಮಾರ್ ಇತ್ತೀಚೆಗೆ ಟೆಂಪಲ್ ರನ್, ಕುಂಭಮೇಳ ಪುಣ್ಯಸ್ನಾನ ಮಾಡಿದ ಬಳಿಕ ಅವರಿಗೆ ದೇವರ ಮೇಲೆ ಭಕ್ತಿ ಹೆಚ್ಚಾಗುತ್ತಿದೆಯೇ ಎಂದು ಎಲ್ಲರ ಅನುಮಾನ. ಅದರಲ್ಲೂ ಇಶಾ ಫೌಂಡೇಷನ್ ನ ಸದ್ಗುರು ಆಹ್ವಾನದ ಮೇರೆಗೆ ಶಿವರಾತ್ರಿ ಕಾರ್ಯಕ್ರಮದಲ್ಲಿ ಗೃಹಸಚಿವ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡ ಬಳಿಕ ಹಲವರು ಹುಬ್ಬೇರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ದೊಡ್ಡ ನಾಯಕರ ಮಾತಿಗೆ ಉತ್ತರ ನೀಡಲ್ಲ. ನಾನು ಹೋಗಿದ್ದು ಶಿವರಾತ್ರಿ ಕಾರ್ಯಕ್ರಮಕ್ಕೆ ಇದು ನನ್ನ ನಂಬಿಕೆ. ಯಾವ ಬಿಜೆಪಿಯವರೂ ಇದನ್ನು ಸ್ವಾಗತ ಮಾಡುವುದು ಬೇಡ. ಯಾರೂ ಈ ಬಗ್ಗೆ ಕಾಮೆಂಟ್ ಮಾಡುವುದು ಬೇಕಾಗಿಲ್ಲ ಎಂದಿದ್ದಾರೆ.
ಸಾವಿರ ಜನ ಸಾವಿರ ಮಾತನಾಡಲಿ. ಟ್ವೀಟ್ ಮಾಡಿ ಟೀಕೆ ಮಾಡುವವರಿಗೆಲ್ಲಾ ನಾನು ಉತ್ತರ ನೀಡಲ್ಲ. ಖುದ್ದು ಸದ್ಗುರು ಗುರೂಜಿ ಕರೆದಿದ್ದಕ್ಕೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಅವರ ಒಳ್ಳೆಯ ಕೆಲಸಗಳನ್ನು ನಾನು ಮೆಚ್ಚಿಕೊಂಡಿದ್ದೇನೆ ಎಂದಿದ್ದಾರೆ.