Publish Date: Tue, 20 Feb 2024 (10:52 IST)
Updated Date: Tue, 20 Feb 2024 (10:57 IST)
ಬೆಂಗಳೂರು: ಇತ್ತೀಚೆಗೆ ತಮ್ಮ ಸಿನಿ ಜೀವನದ 25 ನೇ ವರ್ಷದ ಸಂಭ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ ಹೇಳಿಕೆಯೊಂದು ಈಗ ಮಹಿಳೆಯರ ಆಕ್ರೋಶಕ್ಕೆ ಗುರಿಯಾಗಿದೆ.
ಫೆಬ್ರವರಿ 17 ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ದರ್ಶನ್ ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ. ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ನನಗೆ ನನ್ನ ಕೆಲಸ ಮಾತ್ರ ಮುಖ್ಯ ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ಸಿನಿ ವಿಮರ್ಶಕ ಅಹೋರಾತ್ರ ಕಿಡಿ ಕಾರಿದ್ದರು. ಹೆಣ್ಣೆಂದರೆ ನಿಮಗೆ ಅಷ್ಟು ಕೇವಲನಾ ಎಂದಿದ್ದರು. ಅವರ ಬೆನ್ನಲ್ಲೇ ಮಹಿಳೆಯರು ಸೋಷಿಯಲ್ ಮೀಡಿಯಾಗಳಲ್ಲಿ ದರ್ಶನ್ ವಿರುದ್ಧ ಕಿಡಿ ಕಾರಿದ್ದಾರೆ. ಮಹಿಳೆಯರೆಂದರೆ ಅಷ್ಟೊಂದು ಕೀಳಾ ಎಂದು ಕಿಡಿ ಕಾರಿದ್ದಾರೆ.
25 ನೇ ವರ್ಷದ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ದರ್ಶನ್ ನನಗೆ ನನ್ನ ಕೆಲಸ, ನನ್ನ ಸೆಲೆಬ್ರಿಟಿಗಳು (ಅಭಿಮಾನಿಗಳು) ಮುಖ್ಯ. ತುಂಬಾ ಕಷ್ಟಪಟ್ಟಾದ ಮಾತುಗಳು ಕಹಿಯಾಗಿ ಇರುತ್ತದೆ. ಯಾಕೆಂದರೆ ಆ ಕಷ್ಟ ಜೀರ್ಣಿಸಿಕೊಂಡು ಎಷ್ಟು ಅಂತ ನಾಟಕ ಆಡುವುದಕ್ಕೆ ಆಗುತ್ತದೆ. ಸಾಧ್ಯವಾಗದೇ ಇರುವಾಗ ಕೋಪ ಬರುತ್ತದೆ. ಅದು ಫ್ಯಾಮಿಲಿ ವಿಚಾರ ಕೂಡಾ ಆಗಿರಬಹುದು. ಅದನ್ನೆಲ್ಲಾ ಬದಿಗೆ ಇಡುತ್ತೇನೆ. ನನಗೆ ನನ್ನ ಕೆಲಸ ಮುಖ್ಯ. ಅದಕ್ಕೆಲ್ಲಾ ನನಗೆ ಟೈಮೂ ಇಲ್ಲ, ಪುರುಸೊತ್ತೂ ಇಲ್ಲ. ಬೆಳಿಗ್ಗೆ ಎದ್ದ ತಕ್ಷಣ ಈವತ್ತು ಏನು ಕೆಲಸ ಮಾಡಬೇಕು ಎಂದಷ್ಟೇ ಯೋಚಿಸುತ್ತೇನೆ. ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ. ಅದರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಎಂದಿದ್ದರು.
ಇತ್ತೀಚೆಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಬಹುಶಃ ಅದನ್ನು ಉದ್ದೇಶಿಸಿಯೇ ದರ್ಶನ್ ಪರೋಕ್ಷವಾಗಿ ಈ ಮಾತು ಆಡಿರಬಹುದು ಎನ್ನಲಾಗಿದೆ.ಆದರೆ ದರ್ಶನ್ ಹೇಳಿಕೆ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ. ಸಿನಿಮಾಗಳಲ್ಲಿ ಹೆಣ್ಣಿನ ಬಗ್ಗೆ ಡೈಲಾಗ್ ಹೊಡೆಯುವ ನಟ ನಿಜ ಜೀವನದಲ್ಲಿ ಇಷ್ಟು ಉಡಾಫೆಯಾಗಿ ಮಾತನಾಡಬಾರದು ಎಂದು ಕಿಡಿ ಕಾರಿದ್ದಾರೆ.