Publish Date: Tue, 25 Feb 2025 (13:05 IST)
Updated Date: Tue, 25 Feb 2025 (13:08 IST)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಇಂದು ಬಿಗಿ ಭದ್ರತೆಯಲ್ಲಿ ಕೋರ್ಟ್ ಗೆ ಹಾಜರಾಗಿದ್ದಾರೆ. ಅವರಿಗೆ ಅಭಿಮಾನಿಗಳೇ ಬೆಂಗಾವಲು ಪಡೆಯಾಗಿದ್ದು ವಿಶೇಷವಾಗಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ರೆಗ್ಯುಲರ್ ಜಾಮೀನು ಸಿಕ್ಕಿದೆ. ಆದರೆ ಜಾಮೀನು ನೀಡುವಾಗ ಪ್ರತೀ ತಿಂಗಳೂ ಕೋರ್ಟ್ ಗೆ ಖುದ್ದಾಗಿ ಹಾಜರಾಗಲು ನ್ಯಾಯಾಧೀಶರು ಆದೇಶಿಸಿದ್ದರು.
ಅದರಂತೆ ಇಂದು ನಟ ದರ್ಶನ್ ಬೆಂಗಳೂರಿನ 57 ನೇ ಸಿಸಿಎಚ್ ಕೋರ್ಟ್ ಗೆ ಹಾಜರಾದರು. ದರ್ಶನ್ ಬರುವ ಹಿನ್ನಲೆಯಲ್ಲಿ ಸಾಕಷ್ಟು ಅಭಿಮಾನಿಗಳು ಕೋರ್ಟ್ ಹೊರಗೆ ಜಮಾಯಿಸಿದ್ದರು. ಹೀಗಾಗಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
ದರ್ಶನ್ ಕಾರಿನ ಹಿಂದೆಯೇ ಅವರ ಬೆಂಬಲಿಗರೂ ಬೆಂಗಾವಲು ಪಡೆಯಂತೆ ಹಿಂಬಾಲಿಸಿದ್ದು ವಿಶೇಷವಾಗಿತ್ತು. ಬಳಿಕ ಅಭಿಮಾನಿಗಳತ್ತ ಕೈ ಬೀಸಿ ನಗುತ್ತಲೇ ದರ್ಶನ್ ಕೋರ್ಟ್ ಒಳಗೆ ಹೋದರು. ಆದರೆ ಯಾರೊಂದಿಗೂ ಏನೂ ಮಾತನಾಡಿಲ್ಲ.