Publish Date: Thu, 03 Oct 2024 (14:30 IST)
Updated Date: Thu, 03 Oct 2024 (14:32 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಜೈಲಿನಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ತಿಳಿದುಬಂದಿದೆ. ಅವರ ಬೆನ್ನುನೋವು ಉಲ್ಬಣವಾಗಿದೆ ಎನ್ನಲಾಗಿದೆ.
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಈಗಾಗಲೇ ತಮಗೆ ಬೆನ್ನು ನೋವಿದೆ. ಈ ಕಾರಣಕ್ಕೆ ಸರ್ಜಿಕಲ್ ಚೇರ್ ಕೊಡಿ ಎಂದು ಮನವಿ ಮಾಡಿದ್ದರು. ವೈದ್ಯಕೀಯ ವರದಿ ಪ್ರಕಾರ ಅವರಿಗೆ ಸರ್ಜಿಕಲ್ ಚೇರ್ ಕೊಡಲಾಗಿತ್ತು. ಇದಾದ ಬಳಿಕ ಅವರು ಹಾಸಿಗೆ, ಚೇರ್ ಗೂ ಮನವಿ ಮಡಿದ್ದರು.
ಇದರ ನಡುವೆ ಅವರ ಬೆನ್ನು ನೋವಿನ ಸಮಸ್ಯೆ ಪದೇ ಪದೇ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ. ಬೆನ್ನು ನೋವಿಗೆ ವಿಮ್ಸ್ ಆಸ್ಪತ್ರೆಯ ವೈದ್ಯರನ್ನು ಕರೆಸಿ ತಪಾಸಣೆ ನಡೆಸಲಾಗಿದೆ. ಬೆನ್ನಿನ ಹಿಂಭಾಗದಲ್ಲಿ ಊತ ಕಂಡುಬಂದಿದೆ. ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿರುವುದಾಗಿ ತಿಳಿದುಬಂದಿದೆ.
ಸ್ಕ್ಯಾನಿಂಗ್ ಮಾಡಿಸಲು ದರ್ಶನ್ ನಿರಾಕರಿಸಿದ್ದು ಸದ್ಯಕ್ಕೆ ಅವರಿಗೆ ನೋವು ನಿವಾರಕ ಗುಳಿಗೆ ನೀಡಲಾಗಿದೆ. ದರ್ಶನ್ ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನಾಳೆ ತೀರ್ಪು ಹೊರಬೀಳುವ ಸಾಧ್ಯತೆಯಿದೆ. ಬಿಡುಗಡೆಯ ನಿರೀಕ್ಷೆಯಲ್ಲಿರುವ ದರ್ಶನ್ ಈ ಕಾರಣಕ್ಕೇ ಜೈಲಿನಲ್ಲಿ ಹೆಚ್ಚಿನ ತಪಾಸಣೆಗೆ ನಿರಾಕರಿಸಿದ್ದಾರೆ ಎನ್ನಲಾಗಿದೆ.