Publish Date: Thu, 25 Feb 2021 (09:23 IST)
Updated Date: Thu, 25 Feb 2021 (09:25 IST)
ಬೆಂಗಳೂರು: ತಮ್ಮ ಅಭಿಮಾನಿಗಳಿಂದ ನೋವುಂಟಾಗಿದ್ದಕ್ಕೆ ಹಿರಿಯ ನಟ ಜಗ್ಗೇಶ್ ಕ್ಷಮೆ ಯಾಚಿಸುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿಕೆ ನೀಡಿದ್ದಾರೆ. ದರ್ಶನ್ ಕ್ಷಮೆ ಯಾಚನೆಯನ್ನು ಟ್ವಿಟರ್ ಮೂಲಕ ಜಗ್ಗೇಶ್ ಸ್ವಾಗತಿಸಿದ್ದಾರೆ.
ಮೈಸೂರಿನಲ್ಲಿ ಚಿತ್ರೀಕರಣ ವೇಳೆ ತಮ್ಮ ಅಭಿಮಾನಿಗಳ ಗುಂಪು ಜಗ್ಗೇಶ್ ಗೆ ಮುತ್ತಿಗೆ ಹಾಕಿದ ಘಟನೆ ಬಗ್ಗೆ ಜಗ್ಗೇಶ್ ತೀರಾ ಬೇಸರ ವ್ಯಕ್ತಪಡಿಸಿದ್ದರು. ಈ ಘಟನೆ ಕಳೆದ ಎರಡು ದಿನಗಳಿಂದ ಗೊಂದಲದ ವಾತಾವರಣ ಸೃಷ್ಟಿಸಿತ್ತು. ಇದೀಗ ದರ್ಶನ್ ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಪ್ರಕರಣಕ್ಕೆ ಸುಖಾಂತ್ಯ ನೀಡಿದ್ದಾರೆ. ಅವರು ಹಿರಿಯರು. ನನ್ನ ಸೆಲೆಬ್ರಿಟಿಗಳಿಂದ ಅವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನನಗೆ ಈ ಘಟನೆ ಬಗ್ಗೆ ಗೊತ್ತಿರಲಿಲ್ಲ. ಮುತ್ತಿಗೆ ಹಾಕಿದ ದಿನ ನಾನು ಶೂಟಿಂಗ್ ಗೆಂದು ಯಾವುದೋ ಕಾಡಿನಲ್ಲಿದ್ದೆ. ಅಲ್ಲಿ ನೆಟ್ ವರ್ಕ್ ಸಿಗ್ತಾ ಇರಲಿಲ್ಲ. ಹಾಗಿದ್ದರೂ ನನ್ನ ಹುಡುಗರಿಗೆ ಕರೆ ಮಾಡಿ ಇದೆಲ್ಲಾ ಚೆನ್ನಾಗಿರಲ್ಲ ಎಂದು ಬೈದಿದ್ದೆ. ಜಗ್ಗೇಶ್ ಗೂ ಕರೆ ಮಾಡುವ ಪ್ರಯತ್ನ ಮಾಡಿದ್ದೆ. ಆದರೆ ಸಿಕ್ಕಿರಲಿಲ್ಲ. ಅಡಿಯೋ ಬಹಿರಂಗವಾದ ದಿನವೂ ನಾನು ತಿರುಪತಿಯಲ್ಲಿದ್ದೆ. ನನಗೆ ಮಾರನೇ ದಿನ ವಿಷಯ ಗೊತ್ತಾಯ್ತು. ಆದರೆ ನಾನು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅವರು ಹಿರಿಯರು, ನಮ್ಮ ಬಗ್ಗೆ ಅಲ್ಲದೆ ಇನ್ಯಾರ ಬಗ್ಗೆ ಮಾತಾಡ್ತಾರೆ ಬಿಡು, ಎಂದು ಸುಮ್ಮನಿದ್ದೆ ಎಂದು ದರ್ಶನ್ ಹೇಳಿದ್ದಾರೆ.
ದರ್ಶನ್ ಹೇಳಿಕೆಯನ್ನು ಟ್ವಿಟರ್ ಮೂಲಕ ಸ್ವಾಗತಿಸಿರುವ ಜಗ್ಗೇಶ್ ವಿಷಗಳಿಗೆ ತಾತ್ಕಾಲಿಕ ಸಮಸ್ಯೆಯಾಗಿದ್ದು, ಹೃದಯ ವೈಶಾಲ್ಯತೆ ಇದ್ದಾಗ ಅಪನಂಬಿಕೆ ಮೋಡ ಸರಿಯುತ್ತದೆ. ಧನ್ಯವಾದ ದರ್ಶನ್, ಮನಸ್ಸು ಹಗುರವಾಯಿತು. ಇನ್ನೆಂದು ಇಂಥ ದಿನ ಬರದಿರಲಿ ಎಂದು ಬರೆದುಕೊಂಡಿದ್ದಾರೆ.