ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರವಾಹಿ ಈಗ ರೋಚಕ ಘಟ್ಟಕ್ಕೆ ತಲುಪಿದೆ. ಜೈದೇವ್ ತನ್ನ ಪ್ರೇಯಸಿ ದಿಯಾಗೆ ತಾಳಿ ಕಟ್ಟಲು ಮುಂದಾಗಿದ್ದು ಸ್ವತಃ ಗೌತಮ್ ಬಂದು ತಾಳಿ ಕಟ್ಟು ಎಂದು ಮದುವೆ ಮಾಡಿಸಿದ್ದಾನೆ. ಇದಕ್ಕೀಗ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತನ್ನ ಹೆಂಡತಿ ಮಲ್ಲಿಗೆ ಗುಡ್ ಬೈ ಹೇಳಿ ಜೈದೇವ್ ಮನೆಯವರಿಗೆಲ್ಲಾ ಗನ್ ತೋರಿಸಿ ಬೆದರಿಸಿ ಪ್ರೇಯಸಿ ದಿಯಾ ಜೊತೆ ಮನೆಯಲ್ಲಿಯೇ ಮದುವೆ ಮಾಡಿಕೊಳ್ಳಲು ಮುಂದಾಗುತ್ತಾನೆ. ತಾಳಿ ಕಟ್ಟುವ ಹೊತ್ತಿಗೆ ಭೂಮಿಕಾ, ಮಲ್ಲಿ, ಮಲ್ಲಿ ತಾತ, ಶಕುಂತಲಾ ಜೊತೆ ಎಂಟ್ರಿ ಕೊಡುವ ಗೌತಮ್ ಮದುವೆ ನಿಲ್ಲಿಸುತ್ತಾನೆ ಎಂದು ಎಲ್ಲರೂ ಅಂದುಕೊಂಡಿರುತ್ತಾರೆ.
ಆದರೆ ಗೌತಮ್ ಕಟ್ಟು ತಾಳಿ ಎಂದಿದ್ದು ಎಲ್ಲರೂ ಅಚ್ಚರಿಗೊಳಗಾಗುವಂತೆ ಮಾಡಿದೆ. ಇಂದಿನ ಸಂಚಿಕೆಯಲ್ಲಿ ಮನೆಯವರೆಲ್ಲರ ಎದುರೇ ಜೈದೇವ್ ಎರಡನೇ ಮದುವೆಯಾಗುತ್ತಾನೆ. ತನ್ನ ಬಳಿ ಆಶೀರ್ವಾದ ಪಡೆಯಲು ಬಂದ ಜೈದೇವ್ ಕೆನ್ನೆಗೆ ಭಾರಿಸಿ ಗೌತಮ್ ಇನ್ನು ಈ ಮನೆಗೂ ನಿನಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾನೆ. ಜೈದೇವ್ ತನಗೆ ಬರಬೇಕಾದ ಆಸ್ತಿ ಕೊಡು ಎಂದು ಕೇಳುತ್ತಾನೆ. ಅದಕ್ಕೆ ಗೌತಮ್ ಆತನ ಮುಖಕ್ಕೆ ಪೇಪರ್ಸ್ ಬಿಸಾಕಿ ಎಲ್ಲಾ ರೆಡಿ ಮಾಡು, ಸೈನ್ ಮಾಡ್ತೀನಿ ಎನ್ನುತ್ತಾನೆ.
ಈ ದೃಶ್ಯಕ್ಕೆ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಗೌತಮ್ ಮದುವೆ ನಿಲ್ಲಿಸುತ್ತಾನೆ ಎಂದುಕೊಂಡಿದ್ದೆವು. ಆದರೆ ಮದುವೆ ಮಾಡಿ ಈಗ ಮಲ್ಲಿಗೆ ಅನ್ಯಾಯವಾದಂತಾಗಿದೆ. ಅಷ್ಟೇ ಅಲ್ಲ, ಜೈದೇವ್ ಗೆ ಬೇಕಾಗಿದ್ದನ್ನೇ ಮಾಡುವ ಬದಲು ಆತನಿಗೆ ಬುದ್ಧಿ ಕಲಿಸಬಹುದಿತ್ತು. ಮಲ್ಲಿ ನಿಜವಾಗಿ ಯಾರು ಎಂಬುದನ್ನು ಮದುವೆ ಆಗುವ ಮೊದಲೇ ಹೇಳಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆಲವರು ಎಷ್ಟು ದಿನ ಅಂತ ಅದೇ ವಂಚಕನ ಜೊತೆ ಮಲ್ಲಿ ಜೀವನ ಮಾಡಲು ಸಾಧ್ಯ? ಮಲ್ಲಿ ಇನ್ನಾದರೂ ಚೆನ್ನಾಗಿರಲಿ ಎಂದು ಹಾರೈಸಿದ್ದಾರೆ.