Publish Date: Thu, 25 Jul 2024 (12:55 IST)
Updated Date: Thu, 25 Jul 2024 (12:57 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಇಂದೇ ಗುಡ್ ನ್ಯೂಸ್ ಸಿಗುವ ಸಾಧ್ಯತೆಯಿದೆ. ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಗೆ ಇಂದು ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.
ಹತ್ಯೆ ಕೇಸ್ ನಲ್ಲಿ ದರ್ಶನ್ ನ್ಯಾಯಾಂಗ ಬಂಧನ ಅವಧಿ ಆಗಸ್ಟ್ 1 ರವರೆಗೂ ವಿಸ್ತರಿಸಲಾಗಿತ್ತು. ಆದರೆ ಜೈಲಿನಲ್ಲಿ ನಟ ದರ್ಶನ್ ಗೆ ಪದೇ ಪದೇ ಅನಾರೋಗ್ಯ ಕಾಡಿದೆ. ಇದಕ್ಕೆ ಕಾರಣ ಜೈಲಿನ ಊಟ ಎಂದು ದರ್ಶನ್ ದೂರಿದ್ದಾರೆ. ಜೈಲಿನಲ್ಲಿರುವ ಊಟ ನನಗೆ ಸರಿ ಹೊಂದುತ್ತಿಲ್ಲ. ಹೀಗಾಗಿ ಮನೆ ಊಟಕ್ಕೆ ಅವಕಾಶ ಕೊಡಿ ಎಂದು ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
ಅಲ್ಲದೆ, ಇತ್ತೀಚೆಗಷ್ಟೇ ಕೈ ಆಪರೇಷನ್ ಆಗಿತ್ತು. ಹೀಗಾಗಿ ಜೈಲಿನಲ್ಲಿರುವ ಹಾಸಿಗೆ ಸೆಟ್ ಆಗುತ್ತಿಲ್ಲ. ಮನೆಯಿಂದ ಹಾಸಿಗೆ ಕೊಡಿಸಿ ಎಂದು ಮೊರೆಯಿಟ್ಟಿದ್ದರು. ಈ ಪ್ರಕರಣದ ತೀರ್ಪನ್ನು ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಲಿದೆ. ಈ ಬಗ್ಗೆ ಮೊದಲು ದರ್ಶನ್ ಪರ ವಕೀಲರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಬಳಿಕ ಹೈಕೋರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿತ್ತು.ಅದರಂತೆ ಇಂದು ಕೋರ್ಟ್ ತೀರ್ಪು ನೀಡಲಿದೆ. ದರ್ಶನ್ ಗೆ ಮನೆ ಊಟ ನೀಡುವುದಕ್ಕೆ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದಾರೆ. ಹಾಗಿದ್ದರೂ ಅವರ ಆರೋಗ್ಯದ ದೃಷ್ಟಿಯಿಂದ ಮನೆ ಊಟಕ್ಕೆ ಅವಕಾಶ ಸಿಗಬಹುದೇ ಎಂಬುದಕ್ಕೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.