ಚೆನ್ನೈ: ಕ್ರಿಕೆಟ್ ದಿಗ್ಗಜ ಮಹೇಂದ್ರಸಿಂಗ್ ಧೋನಿ ಅವರಿಗೆ ಶುಕ್ರವಾರ ನಡೆದ ಐಪಿಎಲ್ ಪಂದ್ಯ ಟಿ20 ಕ್ರಿಕೆಟ್ನಲ್ಲಿ 400ನೇ ಪಂದ್ಯವಾಗಿತ್ತು. ಈ ಪಂದ್ಯವನ್ನು ಗೆದ್ದು ಅವಿಸ್ಮರಣೀಯಗೊಳಿಸುವ ತವಕದಲ್ಲಿದ್ದರು. ಆದರೆ, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಐದು ವಿಕೆಟ್ಗಳ ಸೋಲು ಅನುಭವಿಸಿ ಪ್ಲೇ ಆಫ್ ರೇಸ್ನಿಂದಲೇ ಹೊರಬಿತ್ತು.
ಮತ್ತೊಂದೆಡೆ ಸನ್ರೈಸರ್ಸ್ ತಂಡವು ಚೆನ್ನೈನಲ್ಲಿ ಇದೇ ಮೊದಲ ಬಾರಿ ಜಯ ದಾಖಲಿಸಿಕೊಂಡು, ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತು. ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಏರಿತು.;
ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿದ್ದ ಗುರಿ ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ 18.4 ಓವರ್ಗಳಲ್ಲಿ 155 ರನ್ ಗಳಿಸಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮತ್ತೊಮ್ಮೆ ಪಂದ್ಯವನ್ನು ಕೈಚೆಲ್ಲಿದೆ. ಇಶಾನ್ ಕಿಶನ್ ಮತ್ತು ಕಮಿಂಚು ಮೆಂಡಿಸ್ ಬ್ಯಾಟಿಂಗ್ನಲ್ಲಿ ಮಿಂಚಿದರು.
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ನಿಗದಿತ 19.5 ಓವರ್ಗಳಲ್ಲಿ 154 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಆರಂಭದಲ್ಲೇ ಶೇಕ್ ರಶೀದ್ (0) ಹಾಗೂ ಸ್ಯಾಮ್ ಕರನ್ (9) ನಿರಾಸೆ ಮೂಡಿಸಿದರು. ಈ ನಡುವೆ ಆಯುಷ್ ಮ್ಹಾತ್ರೆ (30) ಹಾಗೂ ರವೀಂದ್ರ ಜಡೇಜ (21) ಅಲ್ಪ ಪ್ರತಿರೋಧ ಒಡ್ಡಿದರು.
ಈ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಡೇವಾಲ್ಡ್ ಬ್ರೆವಿಸ್ ಕೊನೆಯ ಹಂತದಲ್ಲಿ ಬಿರುಸಿನ 42 ರನ್ ಗಳಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. 25 ಎಸೆತಗಳನ್ನು ಎದುರಿಸಿದ ಬ್ರೆವಿಸ್ ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 42 ರನ್ ಗಳಿಸಿದರು. ದೀಪಕ್ ಹೂಡಾ ಸಹ 22 ರನ್ಗಳ ಕಾಣಿಕೆ ನೀಡಿದರು.
ಶಿವಂ ದುಬೆ (12) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಎಸ್ಆರ್ಎಚ್ ಪರ ಹರ್ಷಲ್ ಪಟೇಲ್ ನಾಲ್ಕು ಮತ್ತು ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಜಯದೇವ್ ಉನಾದ್ಕಟ್ ತಲಾ ಎರಡು ವಿಕೆಟ್ ಗಳಿಸಿದರು.