ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ನಿಯಮವನ್ನು ಮರೆತು ಮಹಾ ಎಡವಟ್ಟು ಮಾಡಿಕೊಂಡಿದೆ. ಇದಕ್ಕಾಗಿ ಪಂದ್ಯವನ್ನೇ ಸೋಲಬೇಕಾಯಿತು. ಇದು ಅಚ್ಚರಿಯಾದೂ ಸತ್ಯ.
ಚೆನ್ನೈ ತಂಡದ ಗೆಲುವಿಗೆ ಕೊನೆಯ 22 ಎಸೆತಗಳಲ್ಲಿ 42 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಡೆವಾಲ್ಡ್ ಬ್ರೆವಿಸ್ ಲುಂಗಿ ಎನ್ಗಿಡಿ ಎಸೆತದಲ್ಲಿ ಎಲ್ಬಿ ಆಗಿದ್ದರು. ಆರ್ಸಿಬಿ ಆಟಗಾರರ ಮನವಿಗೆ ಅಂಪೈರ್ ಎಲ್ಬಿಡಬ್ಲ್ಯೂ ಔಟ್ ನೀಡಿದರು. ಆದರೆ ನಿಯಮ ಗೊತ್ತಿಲ್ಲದೆ ಬ್ಯಾಟರ್ಗಳು ರನ್ ಕದಿಯಲು ಓಡಿದ್ದು ಸಿಎಸ್ಕೆ ಪಾಲಿಗೆ ದುಬಾರಿಯಾಯಿತು.
ನಿಯಮದ ಪ್ರಕಾರ, ಎಲ್ಬಿಡಬ್ಲ್ಯೂ ಆದರೆ 15 ಸೆಕೆಂಡ್ಗಳ ಒಳಗೆ ಡಿಆರ್ಎಸ್ಗೆ ಮನವಿ ಸಲ್ಲಿಸಬೇಕು. ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ, ಮನವಿಯನ್ನು ತಿರಸ್ಕರಿಸಲಾಗುತ್ತದೆ. ಆದರೆ ಈ ನಿಯಮದ ಬಗ್ಗೆ ಅರಿವಿಲ್ಲದೆ, ಡೆವಾಲ್ಡ್ ಬ್ರೆವಿಸ್ ಹಾಗೂ ರವೀಂದ್ರ ಜಡೇಜಾ 2 ರನ್ ಓಡಿದ್ದಾರೆ.
ಅದರಲ್ಲೂ ಒಂದು ರನ್ ಕಲೆಹಾಕಿದ ಬಳಿಕ ಡಿಆರ್ಎಸ್ಗೆ ಮನವಿ ಸಲ್ಲಿಸಿದ್ದರೂ ಬ್ರೆವಿಸ್ ಅವರಿಗೆ ರಿವ್ಯೂ ಲಭಿಸುತ್ತಿತ್ತು. ಇದರ ಪರಿಕಲ್ಪನೆಯೇ ಇಲ್ಲದೆ, ರವೀಂದ್ರ ಜಡೇಜ ಡೆವಾಲ್ಡ್ ಬ್ರೆವಿಸ್ ಅವರನ್ನು 2ನೇ ರನ್ಗಾಗಿ ಕರೆದಿದ್ದಾರೆ. ಇತ್ತ ಕಡೆಯಿಂದ ಸ್ಟ್ರೈಕ್ನತ್ತ ಓಡಿದ ಬ್ರೆವಿಸ್ ಆ ಬಳಿಕ ಜಡೇಜಾ ಜೊತೆ ಚರ್ಚಿಸಿ ಡಿಆರ್ಎಸ್ಗೆ ಮನವಿ ಸಲ್ಲಿಸಿದ್ದಾರೆ.
ಅಷ್ಟರಲ್ಲಾಗಲೇ ಟೈಮರ್ 25 ಸೆಕೆಂಡ್ಗಳನ್ನು ದಾಟಿತ್ತು. ಅಂದರೆ 15 ಸೆಕೆಂಡ್ಗಳಲ್ಲಿ ತೆಗೆದುಕೊಳ್ಳಬೇಕಾದ ರಿವ್ಯೂ ಅನ್ನು ಬ್ರೆವಿಸ್ 25 ಸೆಕೆಂಡ್ಗಳ ಬಳಿಕ ತೆಗೆದುಕೊಂಡಿದ್ದಾರೆ. ಹೀಗಾಗಿ ಅಂಪೈರ್ ಮನವಿಯನ್ನು ತಿರಸ್ಕರಿಸಿದರು. ಇದರಿಂದಾಗಿ ಡೆವಾಲ್ಡ್ ಬ್ರೆವಿಸ್ ಮೇಲ್ಮನವಿ ಇಲ್ಲದೆ ಪೆವಿಲಿಯನ್ಗೆ ಹಿಂತಿರುಗಬೇಕಾಯಿತು. ಕುತೂಹಲಕಾರಿ ವಿಷಯ ಎಂದರೆ ಅದು ನಾಟೌಟ್ ಆಗಿತ್ತು. ಅಂದರೆ ರಿಪ್ಲೇ ವಿಡಿಯೋದಲ್ಲಿ ಡೆವಾಲ್ಡ್ ಬ್ರೆವಿಸ್ ಕಾಲಿಗೆ ತಾಗಿದ ಚೆಂಡು ವಿಕೆಟ್ನಿಂದ ದೂರ ಸಾಗುತ್ತಿರುವುದು ಕಂಡು ಬಂದಿದೆ.
ಆರ್ಸಿಬಿ ತಂಡವು 5 ವಿಕೆಟ್ ನಷ್ಟಕ್ಕೆ 213 ರನ್ ಗಳ ದೊಡ್ಡ ಗುರಿ ಮುಂದಿಟ್ಟಿತು. ಚೆನ್ನೈ ತಂಡ ಐದು ವಿಕೆಟ್ಗೆ 211 ರನ್ ಗಳಿಸಿ 2 ರನ್ನಿಂದ ಸೋಲು ಕಂಡಿತ್ತು.