Publish Date: Tue, 20 Oct 2020 (09:11 IST)
Updated Date: Tue, 20 Oct 2020 (09:14 IST)
ದುಬೈ: ಐಪಿಎಲ್ ನಲ್ಲಿ ಸದಾ ಚಾಂಪಿಯನ್ ಆಗಿ ಮೆರೆಯುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಪ್ಲೇ ಆಫ್ ನಿಂದ ಹೊರಬೀಳುತ್ತಿರುವ ಮೊದಲ ತಂಡ ಎನ್ನುವ ಕುಖ್ಯಾತಿಗೆ ಒಳಗಾಗುವ ಸಾಧ್ಯತೆಯಿದೆ.
ತಂಡದ ಈ ದುಸ್ಥಿತಿ ಬಗ್ಗೆ ನೆಟ್ಟಿಗರು, ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಧೋನಿಯ ತಪ್ಪು ನಿರ್ಧಾರಗಳ ಬಗ್ಗೆ ಹೇಳುತ್ತಿದ್ದರೆ, ಮತ್ತೆ ಕೆಲವರು ಗೆಲ್ಲಲಿ, ಸೋಲಲಿ ನಮ್ಮ ಬೆಂಬಲ ತಂಡದ ಜತೆಗಿರುತ್ತದೆ ಎಂದಿದ್ದಾರೆ. ಧೋನಿ ಕೇಧಾರ್ ಜಾಧವ್ ಗೆ ಅವಕಾಶ ನೀಡಿದ್ದು, ಸ್ವತಃ ತಾವು ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶಿಸದೇ ಇರುವುದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.
ಅದೂ ಸಾಲದೆಂಬಂತೆ ರಾಜಸ್ಥಾನ್ ವಿರುದ್ಧದ ಪಂದ್ಯದ ಬಳಿಕ ಧೋನಿ ‘ಯುವ ಆಟಗಾರರಿಗೆ ಬೆಂಬಲಿಸಲು ಅವರಲ್ಲಿ ಅಂತಹ ಕಿಡಿ ಕಾಣಲೇ ಇಲ್ಲ’ ಎಂದು ಉಡಾಫೆ ಹೇಳಿಕೆ ನೀಡಿದ್ದು, ಅಭಿಮಾನಿಗಳು, ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹಲವಾರು ಯುವ ಆಟಗಾರರಿಗೆ ಅವಕಾಶ, ಪ್ರೋತ್ಸಾಹ ನೀಡಿದ್ದ ಧೋನಿಯಿಂದ ಇಂತಹ ಹೇಳಿಕೆ ಸರಿಯಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ಮುಟ್ಟಿದ್ದಲ್ಲವೂ ಚಿನ್ನ ಎಂಬಂತಿದ್ದ ಧೋನಿಗೆ ಯಾಕೋ ಈ ಬಾರಿ ಟೂರ್ನಿ ಆರಂಭದಿಂದಲೂ ಕೆಟ್ಟ ಗಳಿಗೆ ಮುಂದುವರಿದುಕೊಂಡು ಬಂದಿದೆ.