ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನಕ್ಕೆ ಸುಮ್ಮನೇ ಕೂರಲು ಬಿಡದೇ ಭಾರತ ಇನ್ನಿಲ್ಲದಂತೆ ಕಾಟ ಕೊಡ್ತಿದೆ. ಈ ಮೂಲಕ ಉಗ್ರರನ್ನು ಛೂ ಬಿಟ್ಟು ಭಾರತ ನೆಮ್ಮದಿ ಕೆಡಿಸುವ ಪಾಕ್ ಗೆ ಸರಿಯಾಗಿಯೇ ಬುದ್ಧಿ ಕಲಿಸುತ್ತಿದೆ.
ಒಂದೆಡೆ ಭಾರತೀಯ ಸೇನೆ ಗಡಿಯಲ್ಲಿ ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದೆ. ಉಗ್ರರ ಅಡಗುದಾಣಗಳನ್ನು ಪತ್ತೆ ಮಾಡಲು ಮುಂದಾಗಿದೆ. ಸಕ್ರಿಯ ಉಗ್ರರ ಮನೆಗಳನ್ನು ಧ್ವಂಸಗೊಳಿಸುತ್ತಿದೆ. ಇನ್ನು, ಗಡಿ ಬಳಿ ಸಾಕಷ್ಟು ಸೇನೆ ನಿಯೋಜಿಸಿ ಪಾಕಿಸ್ತಾನದ ನಿದ್ದೆ ಗೆಡಿಸಿದೆ.
ಇನ್ನೊಂದೆಡೆ ಸಿಂಧು ನದಿ ನೀರು ನಿಲ್ಲಿಸುವ ನಿರ್ಧಾರ ಮಾಡಿರುವುದು ಪಾಕಿಸ್ತಾನವನ್ನು ಕಂಗಾಲು ಮಾಡಿದೆ. ಇದರ ನಡುವೆ ನಿನ್ನೆ ಉರಿ ಡ್ಯಾಮ್ ನಿಂದ ಇದ್ದಕ್ಕಿದ್ದಂತೆ ನೀರು ಬಿಟ್ಟು ಪಾಕಿಸ್ತಾನದಲ್ಲಿ ಪ್ರವಾಹ ಉಂಟಾಗುವ ರೀತಿ ಮಾಡಿದೆ.
ಸಾಮಾನ್ಯವಾಗಿ ಉರಿ ಡ್ಯಾಮ್ ನಿಂದ ನೀರು ಬಿಡುವ ಮುನ್ನ ಪಾಕಿಸ್ತಾನಕ್ಕೆ ಮೊದಲೇ ಮಾಹಿತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಮುನ್ಸೂಚನೆಯಿಲ್ಲದೇ ನೀರು ಬಿಟ್ಟು ಪಾಕಿಸ್ತಾನದ ಬುಡಕ್ಕೇ ತಂದಿಟ್ಟಿದೆ. ಈ ಬಾರಿ ಸರ್ಜಿಕಲ್ ಸ್ಟ್ರೈಕ್ ಬಿಟ್ಟು ನಮ್ಮ ನಿದ್ರೆಗೆಡಿಸಿದ ಪಾಕ್ ಗೆ ಅದೇ ಮಾರ್ಗದಲ್ಲಿ ತಿರುಗೇಟು ಕೊಡಲು ಭಾರತ ಮುಂದಾದ ಹಾಗಿದೆ.