Select Your Language

Notifications

webdunia
webdunia
webdunia
webdunia

ಹೊಟ್ಟೆಯ ಸಮಸ್ಯೆಗಳಿಗೆ ವೀಳ್ಯದೆಲೆಯಲ್ಲಿದೆ ಪರಿಹಾರ

ಹೊಟ್ಟೆಯ ಸಮಸ್ಯೆಗಳಿಗೆ ವೀಳ್ಯದೆಲೆಯಲ್ಲಿದೆ ಪರಿಹಾರ
ಬೆಂಗಳೂರು , ಮಂಗಳವಾರ, 31 ಆಗಸ್ಟ್ 2021 (07:06 IST)
Health Tips: ವೀಳ್ಯದೆಲೆಯಲ್ಲಿ  ಅಪಾರ ಪ್ರಮಾಣದ ವಿಟಮಿನ್ ಅಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳಿದ್ದು ಇದು ಸೋಂಕಿನ ವಿರುದ್ಧ ಹೋರಾಡುತ್ತದೆ.

ವೀಳ್ಯದೆಲೆ ನಮ್ಮ ಜೀವನ ಶೈಲಿಯ ಒಂದು ಭಾಗ. ಅನಾದಿ ಕಾಲದಿಂದಲೂ ಜನರು ಇದನ್ನು ಬಳಕೆ ಮಾಡುತ್ತಿದ್ದಾರೆ. ಬಹುತೇಕ ಜನರು ಊಟದ ನಂತರ ಸುಣ್ಣ ಮತ್ತು ಎಲೆ ಅಡಿಕೆಯನ್ನು ತಿನ್ನುವ ಅಭ್ಯಾಸವನ್ನು ಹೊಂದಿದ್ದಾರೆ.  ಆಹಾರ ಸೇವನೆಯ ನಂತರ ಬಾಯಿಯ ದುರ್ವಾಸನೆಯನ್ನು ದೂರ ಮಾಡಲು ಇದು ಸಹಾಯ ಮಾಡುವುದರ ಜೊತೆಗೆ ಜೀರ್ಣಕ್ರಿಯೆ ವೃದ್ಧಿಗೊಳಿಸುತ್ತದೆ. ಮಲಬದ್ಧತೆ, ಅಜೀರ್ಣ, ಹೊಟ್ಟೆ ಉಬ್ಬರ, ಎದೆಯುರಿ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ವೀಳ್ಯದೆಲೆಯಲ್ಲಿ  ಅಪಾರ ಪ್ರಮಾಣದ ವಿಟಮಿನ್ ಅಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳಿದ್ದು ಇದು ಸೋಂಕಿನ ವಿರುದ್ಧ ಹೋರಾಡುತ್ತದೆ. ದಿನನಿತ್ಯ ಒಂದು ವೀಳ್ಯದೆಲೆ ಸೇವನೆ ಹಲವಾರು ಆರೊಗ್ಯಕರ ಪ್ರಯೋಜನಗಳನ್ನು ನೀಡುತ್ತದೆ.
ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಸಿ ಅಂಶ, ಥಯಾಮಿನ್, ನಯಾಸಿನ್, ರಿಬಾಫ್ಲವಿನ್ ಮತ್ತು ಕ್ಯಾರೋಟಿನ್ ಅಂಶಗಳು ಇದರಲ್ಲಿ ಹೆಚ್ಚಿವೆ.
ಇದರ ಸೇವನೆ  ಮಾಡುವುದರಿಂದ ನಮ್ಮ ಹೊಟ್ಟೆಯ ಭಾಗದ ಪಿಹೆಚ್ ಮಟ್ಟ ಅತ್ಯುತ್ತಮವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಬಹಳ ದಿನಗಳಿಂದ  ಹೊಟ್ಟೆಯ ಆರೋಗ್ಯ ಸರಿ ಇಲ್ಲದಿದ್ದಲ್ಲಿ ವೀಳ್ಯದೆಲೆ ಪರಿಹಾರ ನೀಡುತ್ತದೆ.  ಮಾಡಬೇಕಾಗಿರುವುದು ಇಷ್ಟೇ, ಇಡೀ ರಾತ್ರಿ ಒಂದು ವೀಳ್ಯದೆಲೆಯನ್ನು ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಅದನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ವೀಳ್ಯದೆಲೆಯಲ್ಲಿ ಆಹಾರವನ್ನು ಜೀರ್ಣ ಮಾಡಲು ಅಗತ್ಯವಾಗಿ ಬೇಕಾಗಿರುವ ಜೀರ್ಣ ರಸಗಳಿದ್ದು, ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಹೊಟ್ಟೆಯ ಭಾಗದ ನರಮಂಡಲವನ್ನು ಶಾಂತಗೊಳಿಸುವ ಜೊತೆಗೆ ಆರೋಗ್ಯಕರವಾದ ದೈಹಿಕ ಹುರುಪು ನೀಡುತ್ತದೆ. ಕೆಲವರಿಗೆ ಎಲೆ ಅಡಿಕೆ ಹಾಕಿಕೊಳ್ಳುವುದು ಇಷ್ಟವಾಗುವುದಿಲ್ಲ. ಇಂಥಹ ಸಂದರ್ಭದಲ್ಲಿ ಎಲೆಯನ್ನು ಚೆನ್ನಾಗಿ ಕುದಿಸಿ ಅದರಿಂದ ಎಣ್ಣೆಯನ್ನು ತಯಾರಿಸಿ ಅದನ್ನು ಹೊಟ್ಟೆಯ ಮೇಲ್ಭಾಗದಲ್ಲಿ ಹಚ್ಚಿಕೊಳ್ಳುವುದರಿಂದ ಹೊಟ್ಟೆಯ  ಕೆಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ರಾತ್ರಿಯ ಸಮಯದಲ್ಲಿ ಊಟ ಆದ ಮೇಲೆ ಸ್ವಲ್ಪ ಹೊತ್ತು ಬಿಟ್ಟು ಎಲೆ ಅಡಿಕೆ ಹಾಕುವುದು ಆರೋಗ್ಯಕ್ಕೆ ಒಳ್ಳೆಯದು. ಎಲೆ ಅಡಿಕೆ ಹಾಕುವಾಗ  ಸುಣ್ಣ, ಗುಲ್ಕನ್, ಸೋಂಪು ಕಾಳುಗಳು, ಸ್ವಲ್ಪ ಜೇನುತುಪ್ಪ, ಏಲಕ್ಕಿ ಎಲ್ಲವನ್ನು ಸೇರಿಸಿ ಮಿಶ್ರಣ ಮಾಡಿ ಸೇವನೆ ಮಾಡುವುದು ದೇಹಕ್ಕೆ ಸಾಕಷ್ಟು ಹಿತ ಕೊಡುತ್ತದೆ ಜೊತೆಗೆ ಸೇವಿಸಿದ ಆಹಾರ ಇವುಗಳ ಪ್ರಭಾವದಿಂದ ಸುಲಭವಾಗಿ ಜೀರ್ಣವಾಗುತ್ತದೆ.
ಗ್ಯಾಸ್ಟ್ರಿಕ್  ಸಮಸ್ಯೆಗೆ ಈ ವೀಳ್ಯದೆಲೆ ಬಹಳ ಉಪಯುಕ್ತ. ಹೊಟ್ಟೆಯಲ್ಲಿ ಆಮ್ಲದ ಪ್ರಮಾಣ ಹೆಚ್ಚಾದರೆ ಅದು ಮೇಲ್ಭಾಗಕ್ಕೆ ಏರಿದಂತಾಗಿ ಅತಿಯಾದ ಎದೆಯುರಿ ಉಂಟಾಗುತ್ತದೆ. ಹೊಟ್ಟೆಯ ಭಾಗದಲ್ಲಿ ಉಂಟಾಗುವ ಕಿರಿಕಿರಿ ಮತ್ತು ಉರಿಯೂತವನ್ನು ಇದು ನಿವಾರಣೆ ಮಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಾದಾಮಿ ಹೀಗೆ ಸೇವಿಸಿ ಆರೋಗ್ಯ ಲಾಭ ಪಡೆಯಿರಿ