Publish Date: Fri, 05 Apr 2019 (18:12 IST)
Updated Date: Fri, 05 Apr 2019 (18:14 IST)
ದೇಶಕ್ಕೆ ಇಂದು ಸುಭದ್ರ ಮತ್ತು ಸುಸ್ಥಿರ ಆಡಳಿತ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜ್ಞಾವಂತ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕೆಂದ ಕೇಂದ್ರ ಸಚಿವ ಕೋರಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ಜನರಲ್ಲಿ ಈ ರೀತಿ ಮನವಿ ಮಾಡಿದರು.
ಶುಕ್ರವಾರ ಬೆಳಿಗ್ಗೆ ಯಶವಂತಪುರ ವಿಧಾನ ಕ್ಷೇತ್ರದ ತಾವರೇಕೆರೆ ಹೋಬಳಿ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕಳೆದ ಐದು ವರ್ಷದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಇದೆಲ್ಲವನ್ನೂ ಕ್ಷೇತ್ರದ, ನಾಡಿನ, ದೇಶದ ಜನತೆ ಗಮನಿಸಿದ್ದು ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಪುನಃ ಆಡಳಿತ ನಡೆಸಲಿದೆ. ನರೇಂದ್ರ ಮೋದಿಯವರು ಪುನಃ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಗತ್ತಿಗೆ ಸಂದೇಶ ರವಾನೆ:
ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನದ ನೆಲಕ್ಕೇ ನುಗ್ಗಿ ನಮ್ಮ ಸೈನಿಕರು ಉಗ್ರರನ್ನು ಸದೆ ಬಡಿದಿದ್ದಾರೆ. ದೇಶದ ರಕ್ಷಣೆ ವಿಷಯದಲ್ಲಿ ರಾಜೀಯಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನರೇಂದ್ರ ಮೋದಿಯವರು ಜಗತ್ತಿಗೆ ಈ ಮೂಲಕ ಸಾರಿದ್ದಾರೆ ಎಂದರು.
ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ಸೈನಿಕರಿಗೆ ಸರಿಯಾದ ಸ್ವಾತಂತ್ರ್ಯ ನೀಡಿರಲಿಲ್ಲ. ಉಗ್ರರ ಬಗ್ಗೆ ಮೃದು ಧೋರಣೆ ಅನುಸರಿಸಲಾಗಿತ್ತು. ಆದ್ದರಿಂದಲೇ ಪಾಕಿಸ್ತಾನ ಚಿಗಿತುಕೊಂಡಿತ್ತು. ಮೋದಿಯವರು ಈಗ ಪಾಕ್ಗೆ ಸರಿಯಾಗಿ ಪಾಠ ಕಲಿಸಿದ್ದಾರೆ. ವಿಶ್ವದಲ್ಲಿ ಈಗ ಪಾಕಿಸ್ತಾನ ಒಬ್ಬಂಟಿಯಾಗಿದೆ ಎಂದು ಹೇಳಿದರು.