Publish Date: Tue, 16 Jul 2019 (10:26 IST)
Updated Date: Tue, 16 Jul 2019 (10:28 IST)
ಮುಂಬೈ: ವಿಶ್ವ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾಗೆ ವಿಶಿಷ್ಟ ಸ್ಥಾನ ಕಲ್ಪಿಸಿಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದ ಮಾಜಿ ನಾಯಕ ಧೋನಿಗೆ ಇಂದು ಬಿಸಿಸಿಐ ಮೂಲಗಳೇ ನಿವೃತ್ತಿ ಹೇಳಲು ಪರೋಕ್ಷವಾಗಿ ಒತ್ತಡ ಹೇರುತ್ತಿವೆ.
ಇದು ಭಾರತ ತಂಡದ ಸ್ಥಿತಿ! ಹೆಚ್ಚಿನ ಹಿರಿಯ ಆಟಗಾರರಿಗೂ ಇದೇ ರೀತಿ ಬಲವಂತವಾಗಿ ನಿವೃತ್ತಿ ನೀಡುತ್ತಿರುವುದು ನಮ್ಮ ದೇಶದ ದುರಾದೃಷ್ಟ. ಹಿಂದೆ ಮಾಜಿ ನಾಯಕ ಗಂಗೂಲಿ, ದ್ರಾವಿಡ್, ಸಚಿನ್ ಕೂಡಾ ಇದಕ್ಕೆ ಹೊರತಾಗಲಿಲ್ಲ. ಇವರೆಲ್ಲಾ ಅಪ್ರತಿಮ ಆಟವಾಡುತ್ತಿದ್ದಾಗ ಹೊತ್ತು ಮೆರೆದವರು, ವೃತ್ತಿ ಜೀವನದ ಸಂಧ್ಯಾಕಾಲದಲ್ಲಿ ಅಷ್ಟೇ ಗೌರವದಿಂದ ಅವರಾಗಿಯೇ ನಿವೃತ್ತಿ ಹೇಳುವ ಬದಲು ಬಲವಂತವಾಗಿ ಹೊರದಬ್ಬಲಾಗುತ್ತಿರುವುದು ವಿಪರ್ಯಾಸ.
ಈಗ ಧೋನಿ ವಿಚಾರದಲ್ಲೂ ಅದುವೇ ನಡೆಯುತ್ತಿದೆ. ಭಾರತಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಈಗ ನಿವೃತ್ತಿ ಹೇಳದಿದ್ದರೆ ಅವರನ್ನು ತಂಡದಿಂದ ಕೈಬಿಡುವ ತಂತ್ರಗಾರಿಕೆ ತೆರೆಹಿಂದೆ ನಡೆಯುತ್ತಿದೆ. ಈ ಮೂಲಕ ಬಲವಂತವಾಗಿ ಅವರ ಕೈಯಲ್ಲಿ ನಿವೃತ್ತಿ ಹೇಳಿಸುವ ಯತ್ನ ನಡೆಯುತ್ತಿದೆ.
ಇತ್ತೀಚೆಗೆ ನಿಧಾನಗತಿಯ ಬ್ಯಾಟಿಂಗ್ ನಿಂದ ಟೀಕೆಗೊಳಗಾಗಿದ್ದ ಧೋನಿ ಇನ್ನು ಮುಂದೆ ಪ್ರದರ್ಶನ ನೀಡದಿದ್ದರೆ ತಂಡಕ್ಕೆ ಆಯ್ಕೆ ಮಾಡದೇ ಇರಲು ಬಿಸಿಸಿಐ ಮೂಲಗಳು ಚಿಂತನೆ ನಡೆಸಿವೆ. ಹೀಗಾಗಿ ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದು ಧೋನಿಗೆ ಅನಿವಾರ್ಯವಾಗಿದೆ. ಇದರಿಂದಾಗಿ ಅವರು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಆಯ್ಕೆಯಾಗುವುದು ಅನುಮಾನವಾಗಿದೆ. ಈ ಅವಮಾನಗಳ ನಡುವೆ ಅವರೇ ನಿವೃತ್ತಿ ಘೋಷಿಸಿದರೂ ಅಚ್ಚರಿಯಿಲ್ಲ.