ಮುಂಬೈ: ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಪತ್ನಿ, ಮಗನ ಸಮೇತ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ಇದು ಕಟ್ಟಾ ಸಂಪ್ರದಾಯವಾದಿಗಳ ಕಣ್ಣು ಕೆಂಪಗಾಗಿಸಿದ್ದು ಮತಾಂತರವಾಗಿ ಎಂದು ಕಿಡಿ ಕಾರಿದ್ದಾರೆ.
ಜಹೀರ್ ಖಾನ್ ಪತ್ನಿ ಸಾಗರಿಕಾ ಮತ್ತು ಮಗನ ಜೊತೆ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಜಹೀರ್ ಖಾನ್ ಮೂಲತಃ ಮುಸ್ಲಿಂ ಧರ್ಮೀಯರಾದರೂ ಅವರ ಪತ್ನಿ ಸಾಗರಿಕಾ ಹಿಂದೂ ಧರ್ಮದವರು. ಹೀಗಾಗಿ ದಂಪತಿ ಎರಡೂ ಧರ್ಮವನ್ನೂ ಸಮಾನವಾಗಿ ಗೌರವಿಸುತ್ತಾರೆ.
ಇದೀಗ ಪತ್ನಿ ಜೊತೆಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಜಹೀರ್ ಖಾನ್ ರಾಮಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾನಿಗೆ ಭಕ್ತಿಯಿಂದ ಕೈ ಮುಗಿದಿದ್ದಾರೆ. ಈ ಮೂಲಕ ಪತ್ನಿಯ ಧರ್ಮವನ್ನು ಗೌರವಿಸಿದ್ದಾರೆ. ಆದರೆ ಇದಕ್ಕೆ ಕಟ್ಟಾ ಸಂಪ್ರದಾಯವಾದಿಗಳು ಕೆಂಗಣ್ಣು ಬೀರಿದ್ದಾರೆ.
ಇಷ್ಟೆಲ್ಲಾ ಮಾಡುವ ನೀವು ಮತಾಂತರವಾಗಿಬಿಡಬಹುದಲ್ವೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ನೀವು ಅನ್ಯ ಧರ್ಮದ ಆಚರಣೆ ಮಾಡಿ ಕಾಫಿರನಾಗಿದ್ದೀರಿ ಎಂದು ಕಿಡಿ ಕಾರಿದ್ದಾರೆ.