Publish Date: Thu, 22 Feb 2024 (08:50 IST)
Updated Date: Thu, 22 Feb 2024 (08:52 IST)
ರಾಂಚಿ: ರಾಂಚಿ ಎಂದ ತಕ್ಷಣ ನೆನಪಾಗುವುದು ಮಾಜಿ ನಾಯಕ ಧೋನಿ ಹೆಸರು. ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯವಾಡಲು ರಾಂಚಿಗೆ ಬಂದಿಳಿದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಧೋನಿ ನೆನಪು ಕಾಡುತ್ತಿದೆ.
ನಾಳೆಯಿಂದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಧೋನಿ ತವರು ರಾಂಚಿ ಮೈದಾನದಲ್ಲಿ ಆಡಲಿದೆ. ರಾಂಚಿಗೆ ಪ್ರಯಾಣ ಬೆಳೆಸುತ್ತೇವೆ ಎಂದಾಗಲೇ ಟೀಂ ಇಂಡಿಯಾ ವಿಕೆಟ್ ಕೀಪರ್ ಧ್ರುವ್ ಜುರೆಲ್ ಪುಳಕಿತರಾಗಿದ್ದರು. ಧೋನಿಯನ್ನು ಒಮ್ಮೆ ನೋಡಲು ಸಿಕ್ಕಿದರೆ ಸಾಕು ಎಂದು ಬಯಕೆ ವ್ಯಕ್ತಪಡಿಸಿದ್ದಾರೆ. ಹಿಂದೊಮ್ಮೆ ಧೋನಿಯನ್ನು ಭೇಟಿಯಾದ ಕ್ಷಣವನ್ನು ಈಗಲೂ ಮರೆಯಲಾಗುತ್ತಿಲ್ಲ ಎಂದಿದ್ದರು.
ಧೋನಿ ಕೂಡಾ ವಿಕೆಟ್ ಕೀಪರ್ ಬ್ಯಾಟಿಗರಾಗಿದ್ದರು. ಹೀಗಾಗಿ ಧ್ರುವ್ ಗೆ ಮಾಜಿ ನಾಯಕ ಎಂದರೆ ಎಲ್ಲಿಲ್ಲದ ಅಭಿಮಾನ. ಧೋನಿಯನ್ನು ಒಮ್ಮೆ ಭೇಟಿ ಮಾಡಬೇಕು ಎಂಬ ಕನಸು ಅವರಿಗಿದೆ. ಈಗ ರಾಂಚಿಯಲ್ಲೇ ಧೋನಿ ಐಪಿಎಲ್ ಗೆ ಅಭ್ಯಾಸ ನಡೆಸುತ್ತಿರುವುದರಿಂದ ಧೋನಿಯನ್ನು ಭೇಟಿಯಾಗಬಹುದು ಎಂಬ ಭರವಸೆ ಅವರಲ್ಲಿದೆ.
ಕೇವಲ ಧ್ರುವ್ ಗೆ ಮಾತ್ರವಲ್ಲ, ಬ್ಯಾಟಿಗ ಶುಬ್ಮನ್ ಗಿಲ್ ಕೂಡಾ ಇದೇ ಬಯಕೆ ವ್ಯಕ್ತಪಡಿಸಿದ್ದಾರೆ. ರಾಂಚಿಗೆ ಬಂದಾಗಲೆಲ್ಲಾ ಧೋನಿ ನೆನಪು ಕಾಡುತ್ತದೆ. ನಾವು ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಇಡೀ ಟೀಂ ಇಂಡಿಯಾ ಧೋನಿ ಭಾಯಿಯನ್ನು ಮಿಸ್ ಮಾಡುತ್ತಿದ್ದೇವೆ. ಅದು ರಾಂಚಿಯಲ್ಲಿ ಮಾತ್ರವಲ್ಲ, ಜಗತ್ತಿನ ಯಾವುದೇ ಮೂಲೆಯಲ್ಲಿ ಆಡುವಾಗ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ಹಿಂದೆ ಇಲ್ಲಿಗೆ ಟೀಂ ಇಂಡಿಯಾ ಆಡಲು ಬಂದಿದ್ದಾಗ ಧೋನಿ ಅಭ್ಯಾಸದ ನಡುವೆ ಭೇಟಿ ನೀಡಿ ಆಟಗಾರರನ್ನು ಮಾತನಾಡಿಸಿದ್ದರು. ಈ ಬಾರಿಯೂ ಧೋನಿ ಟೀಂ ಇಂಡಿಯಾ ಆಟಗಾರರನ್ನು ಭೇಟಿ ಮಾಡಲು ಬರುತ್ತಾರಾ ಕಾದು ನೋಡಬೇಕು.