ಬೆಂಗಳೂರು: ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ಆರ್ ಸಿಬಿ ಚಾಂಪಿಯನ್ ಆದ ಬಳಿಕ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಭಾಷಣ ಮಾಡಿದ್ದಾರೆ. ಈ ವೇಳೆ ಬೆಂಗಳೂರಿನಲ್ಲಿ ಹೇಗಿರುತ್ತೋ ನೋಡಕ್ಕೆ ಕಾಯ್ತಿದ್ದೀನಿ ಎಂದು ಹೇಳಿಕೊಂಡಿದ್ದಾರೆ.
ಆರ್ ಸಿಬಿ ಕಪ್ ಗೆದ್ದು ಮೈದಾನದಲ್ಲಿ ಸೆಲೆಬ್ರೇಷನ್ ನಡೆದ ಬಳಿಕ ಎಬಿಡಿ ವಿಲಿಯರ್ಸ್ ಜೊತೆ ಕೊಹ್ಲಿ ಡ್ರೆಸ್ಸಿಂಗ್ ರೂಂಗೆ ಬಂದರು. ಬಂದವರೇ ಆಟಗಾರರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ರಜತ್ ಪಾಟೀದಾರ್ ಕ್ಯಾಪ್ಟನ್ಸಿ ಬಗ್ಗೆ ಹೊಗಳಿದರು.
ಬಳಿಕ ನಮಗೆ ನಿಜವಾಗಿಯೂ ವಾತಾವರಣ ಹೇಗಿದೆ ಎಂದು ಗೊತ್ತಾಗುವುದು ಬೆಂಗಳೂರಿಗೆ ಬಂದ ಮೇಲೆ. ಅಲ್ಲಿ ಜನ ಹೇಗೆ ಸ್ವೀಕರಿಸುತ್ತಾರೋ ಎಂದು ನೋಡಲು ಕಾತುರನಾಗಿದ್ದೇನೆ. ಯಾಕೆಂದರೆ ಅವರೂ ನಮ್ಮ ಜೊತೆ ಕಪ್ ಗಾಗಿ ಕಾಯುತ್ತಿದ್ದರು. ನಾವು ಈ ಸಲ ಕಪ್ ಗೆಲ್ಲಲು ಈ ಬೆಂಗಳೂರು ಹುಡುಗನೂ ಕಾರಣ (ಮಯಾಂಕ್ ಅಗರ್ವಾಲ್). ಒಬ್ಬ ಬೆಂಗಳೂರು ಹುಡುಗ (ದೇವದತ್ತ ಪಡಿಕ್ಕಲ್) ಹೋದಾಗ ಇನ್ನೊಬ್ಬ ಬಂದು ನಮ್ಮನ್ನು ಕಾಪಾಡಿದ ಎಂದು ಕೊಹ್ಲಿ ಹೊಗಳಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಮಯಾಂಕ್ ಅಗರ್ವಾಲ್, ನನಗಿಂತ ಹೆಚ್ಚು ನಿಮ್ಮನ್ನು ಬೆಂಗಳೂರು ಜನ ಬೆಂಗಳೂರು ಹುಡುಗ ಎಂದುಕೊಂಡಿದ್ದಾರೆ. ನೀವು ಅಲ್ಲಿಯ ಜನರ ಪ್ರೀತಿ ಗಳಿಸಿದ್ದೀರಿ ಎಂದು ಹೊಗಳಿದ್ದಾರೆ. ಇದಕ್ಕೆ ಕೊಹ್ಲಿ ಕೂಡಾ ಖುಷಿಯಾಗಿದ್ದಾರೆ.