ಚಂಢೀಘಡ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಪಂದ್ಯದಲ್ಲಿ ಸೋತ ಬಳಿಕ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಸಿಟ್ಟು ಇಳಿದಿರಲಿಲ್ಲ. ಗಂಭೀರ್ ವರ್ತನೆ ನೋಡಿ ನೆಟ್ಟಿಗರು ಈ ಹಿಂದಿನ ಕೋಚ್ ದ್ರಾವಿಡ್ ಎಂದೂ ಹೀಗಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಭಾರತದ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ಹೀನಾಯವಾಗಿತ್ತು. ಬೌಲಿಂಗ್ ನಲ್ಲಿ ಅರ್ಷ್ ದೀಪ್ ಸಿಂಗ್ ಒಂದೇ ಓವರ್ ನಲ್ಲಿ 7 ವೈಡ್ ಬಾಲ್ ಎಸೆದು ಕೋಚ್ ಗಂಭೀರ್ ಪಿತ್ತ ನೆತ್ತಿಗೇರುವಂತೆ ಮಾಡಿದ್ದರು.
ಬ್ಯಾಟಿಂಗ್ ನಲ್ಲೂ ಅದೇ ಕತೆ. ಶುಭಮನ್ ಗಿಲ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದು ಈ ಬಾರಿ ಖಾತೆ ತೆರೆಯಲೂ ವಿಫಲರಾಗಿದ್ದಾರೆ. ಸೂರ್ಯಕುಮಾರ್ ಯಾದವ್ ಮತ್ತೆ ಏಕಂಕಿ ಸಾಧನೆ. ತಿಲಕ್ ವರ್ಮ 62 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಇದು ಕೋಚ್ ಗಂಭೀರ್ ಸಿಟ್ಟಿಗೆ ಕಾರಣವಾಗಿದೆ.
ಪಂದ್ಯ ಮುಗಿದ ಬಳಿಕವೂ ಅವರು ತಮ್ಮ ಆಟಗಾರರ ಮೇಲೆ ಸಿಟ್ಟಿನಿಂದಲೇ ಕಾಟಾಚಾರಕ್ಕೆ ಎಂಬಂತೆ ಕೈ ಕುಲುಕಿದ್ದಾರೆ. ಗಂಭೀರ್ ವರ್ತನೆ ಬಗ್ಗೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಸೋಲೋ, ಗೆಲುವೋ ಒಬ್ಬ ಕೋಚ್ ತಂಡದ ಆಟಗಾರರಲ್ಲಿ ಸ್ಪೂರ್ತಿ ತುಂಬಬೇಕು. ಅದು ಬಿಟ್ಟು ಈ ರೀತಿ ಸಿಟ್ಟು ಮಾಡಿಕೊಂಡು ಅವರ ಆತ್ಮವಿಶ್ವಾಸಕ್ಕೆ ಧಕ್ಕೆ ತರುವುದಲ್ಲ. ಈ ಹಿಂದೆ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಯಾವತ್ತೂ ಈ ರೀತಿ ನಡೆದುಕೊಂಡಿರಲಿಲ್ಲ. ಸೋತಾಗಲೂ ತಮ್ಮ ಆಟಗಾರರ ಜೊತೆಯಾಗಿ ನಿಲ್ಲುತ್ತಿದ್ದರು ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.