Publish Date: Mon, 19 Jul 2021 (08:45 IST)
Updated Date: Mon, 19 Jul 2021 (08:57 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಭರ್ಜರಿಯಾಗಿ 7 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಭಾರತದ ಸ್ಪಿನ್ನರ್ ಗಳ ದಾಳಿಗೆ ಸಿಲುಕಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ದೀಪಕ್ ಚಹರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ತಲಾ 2 ವಿಕೆಟ್ ಪಡೆದರೆ ಪಾಂಡ್ಯ ಸಹೋದರರು ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಯುವ ಕ್ರಿಕೆಟಿಗರು ಯದ್ವಾ ತದ್ವಾ ಬ್ಯಾಟ್ ಬೀಸಿದರು. ಕೇವಲ 5 ಓವರ್ ಗಳಲ್ಲೇ ತಂಡದ ಮೊತ್ತ 50 ರನ್ ದಾಟಿತ್ತು. ಆರಂಭಿಕ ಪೃಥ್ವಿ ಶಾ 24 ಎಸೆತಗಳಲ್ಲಿ 43 ರನ್ ಗಳಿಸಿದರೆ, ಅವರಿಗೆ ತಕ್ಕ ಸಾಥ್ ನೀಡಿದ ನಾಯಕ ಶಿಖರ್ ಧವನ್ ತಾಳ್ಮೆಯ ಆಟವಾಡಿ 95 ಎಸೆತಗಳಿಂದ 86 ರನ್ ಗಳಿಸಿ ಅಜೇಯರಾಗುಳಿದರು. ಶಾ ಔಟಾದ ಬಳಿಕ ಬಂದ ಇಶಾನ್ ಕಿಶನ್ ಕೂಡಾ ಹೊಡೆಬಡಿಯ ಇನಿಂಗ್ಸ್ ಆಡಿದರು. 42 ಎಸೆತಗಳಲ್ಲೇ 59 ರನ್ ಗಳಿಸಿ ಗೆಲುವಿನ ಹಾದಿ ಸುಗಮವಾಗಿಸಿದರು. ಆದರೆ ಕನ್ನಡಿಗ ಮನೀಶ್ ಪಾಂಡೆಯದ್ದು ಇದಕ್ಕೆ ತದ್ವಿರುದ್ದ ಆಟ 40 ಎಸೆತ ಎದುರಿಸಿದ ಅವರು 26 ರನ್ ಗಳಿಸಲಷ್ಟೇ ಶಕ್ತರಾದರು. ಆದರೆ ನಂತರ ಬಂದ ಸೂರ್ಯಕುಮಾರ್ ಯಾದವ್ 20 ಎಸೆತಗಳಲ್ಲೇ 31 ರನ್ ಚಚ್ಚಿ ಗೆಲುವಿನ ದಡ ಮುಟ್ಟಿಸಿದರು. ಭಾರತ ಅಂತಿಮವಾಗಿ 36.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿತು.