Publish Date: Mon, 25 Sep 2023 (08:30 IST)
Updated Date: Mon, 25 Sep 2023 (08:53 IST)
ಇಂಧೋರ್: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯವನ್ನು ಸರಣಿ ಗೆಲುವು ಸಂಪಾದಿಸಿರುವ ಟೀಂ ಇಂಡಿಯಾ ಹಲವು ದಾಖಲೆಗಳನ್ನು ಮಾಡಿದೆ.
ಭಾರತ ನೀಡಿದ್ದ 400 ರನ್ ಗಳ ಗುರಿ ಬೆನ್ನತ್ತಿದ ಆಸೀಸ್ ಗೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಪಂದ್ಯವನ್ನು 33 ಓವರ್ ಗಳಿಗೆ ಕಡಿತ ಮಾಡಲಾಯಿತು. 33 ಓವರ್ ಗಳಲ್ಲಿ ಆಸೀಸ್ 317 ರನ್ ಗಳಿಸಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ಆದರೆ ಆಗಲೇ ಪ್ರಸಿದ್ಧ ಕೃಷ್ಣ ಆಸೀಸ್ ನ ಎರಡು ವಿಕೆಟ್ ಗಳನ್ನು ಉಡಾಯಿಸಿ ಆಘಾತ ನೀಡಿದ್ದರು.
ಮಳೆ ನಿಂತು ಆಟ ಶುರುವಾದ ಮೇಲೆ ಅರ್ಧಶತಕ ಗಳಿಸಿದ್ದ ಡೇವಿಡ್ ವಾರ್ನರ್ ರವಿಚಂದ್ರನ್ ಅಶ್ವಿನ್ ಎಸೆತದಲ್ಲಿ ಎಲ್ ಬಿ ಡಬ್ಲ್ಯು ಔಟಾಗಿ ನಿರ್ಗಮಿಸಿದರು. ಆದರೆ ಬಾಲ್ ಟ್ರ್ಯಾಕಿಂಗ್ ನಲ್ಲಿ ಬಾಲ್ ಕೊಂಚ ಬ್ಯಾಟ್ ಗೆ ಸವರಿದ್ದು ಸ್ಪಷ್ಟವಾಗಿತ್ತು. ವಾರ್ನರ್ ಡಿಆರ್ ಎಸ್ ತೆಗೆದುಕೊಂಡಿದ್ದರೆ ಬಚಾವ್ ಆಗುತ್ತಿದ್ದರು. ಆದರೆ ಅದೃಷ್ಟ ಭಾರತದ ಪಾಲಿಗಿತ್ತು. ಬಳಿಕ ಅಶ್ವಿನ್ ಮತ್ತೆರಡು ವಿಕೆಟ್ ಕಬಳಿಸಿ ಆಘಾತ ನೀಡಿದರು. ಕೊನೆಯಲ್ಲಿ ಆಸೀಸ್ ಪರ ಸೀನ್ ಅಬೋಟ್ 36 ಎಸೆತಗಳಿಂದ 5 ಸಿಕ್ಸರ್ ಸಹಿತ 54 ರನ್ ಸಿಡಿಸಿ ಕೊಂಚ ಅಪಾಯಕಾರಿ ಎನಿಸಿದರು. ಆದರೆ ಟಾರ್ಗೆಟ್ ಬೃಹತ್ ಆಗಿದ್ದರಿಂದ ಆಸೀಸ್ ಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆಸ್ಟ್ರೇಲಿಯಾ 28.2 ಓವರ್ ಗಳಲ್ಲಿ 217 ರನ್ ಗಳಿಗೆ ಆಲೌಟ್ ಆಗುವುದರೊಂದಿಗೆ 99 ರನ್ ಗಳ ಸೋಲೊಪ್ಪಿಕೊಂಡಿತು. ಇದರೊಂದಿಗೆ ಭಾರತ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿತು.
ಈ ಗೆಲುವಿನೊಂದಿಗೆ ಭಾರತ ತಂಡ ಹಾಗೂ ಆಟಗಾರರು ಕೆಲವು ದಾಖಲೆಗಳನ್ನೂ ಮಾಡಿದರು. ಈ ಮೂಲಕ ಒಂದೇ ತಾಣದಲ್ಲಿ ಸೋಲಿಲ್ಲದೇ ಅತೀ ಹೆಚ್ಚು ಗೆಲುವು ಪಡೆದ ದಾಖಲೆ ಭಾರತ ಮಾಡಿತು. ಇಂಧೋರ್ ನಲ್ಲಿ ಇದು ಭಾರತದ 7 ನೇ ಗೆಲುವಾಗಿದೆ. ಈ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿದ ರವಿಚಂದ್ರನ್ ಅಶ್ವಿನ್ ಒಂದೇ ತಂಡದ ವಿರುದ್ಧ ಮತ್ತು ಆಸೀಸ್ ವಿರುದ್ಧ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ಮಾಡಿದರು. ಅಶ್ವಿನ್ ಆಸೀಸ್ ವಿರುದ್ಧ 144 ವಿಕೆಟ್ ಪಡೆದಿದ್ದಾರೆ. ಇದಕ್ಕೆ ಮೊದಲು 142 ವಿಕೆಟ್ ಪಡೆದಿದ್ದ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದರು.