Publish Date: Fri, 22 Nov 2019 (09:43 IST)
Updated Date: Fri, 22 Nov 2019 (09:45 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಟಿ20 ಮತ್ತು ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು, ತಂಡದ ಆಟಗಾರರ ಪಟ್ಟಿ ನೋಡಿ ಅಭಿಮಾನಿಗಳು ಟ್ವಿಟರ್ ಪೇಜ್ ನಲ್ಲಿ ಆಯ್ಕೆಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳಪೆ ಫಾರ್ಮ್ ನಲ್ಲಿರುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಮತ್ತೆ ಅವಕಾಶ ನೀಡಿ ದ.ಆಫ್ರಿಕಾ ಸರಣಿಯಲ್ಲಿ ಆಯ್ಕೆ ಮಾಡಿ ಅವಕಾಶವೇ ನೀಡದ ಯುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ರನ್ನು ಕೈ ಬಿಟ್ಟಿದ್ದಕ್ಕೆ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ರಿಷಬ್ ಗೆ ಎಷ್ಟು ಬಾರಿ ಅವಕಾಶ ನೀಡ್ತೀರಿ? ಸಂಜು ಸ್ಯಾಮ್ಸನ್ ನಿಮ್ಮ ಅವಸ್ಥೆ ನೋಡಿ ತಾವೇ ಮುಜುಗರಪಟ್ಟುಕೊಳ್ಳಬೇಕು ಎಂದೆಲ್ಲಾ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಅದರ ಜತೆಗೆ ಶಿಖರ್ ಧವನ್ ಕಳಪೆ ಫಾರ್ಮ್ ನಲ್ಲಿದ್ದರೂ ಮತ್ತೆ ಅವರಿಗೆ ಅವಕಾಶ ನೀಡಲಾಗಿದೆ. ಇನ್ನು, ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಕೆಎಲ್ ರಾಹುಲ್ ಗೆ ಕರೆ ನೀಡಲಾಗಿದೆ. ಇನ್ನು, ವೇಗಿ ಮೊಹಮ್ಮದ್ ಶಮಿ ಎರಡು ವರ್ಷಗಳ ಬಳಿಕ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ.
ಟಿ20 ತಂಡ ಇಂತಿದೆ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶಿಖರ್ ಧವನ್, ರಿಷಬ್ ಪಂತ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ಶಿವಂ ದುಬೆ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ದೀಪರ್ ಚಹರ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ.
ಏಕದಿನ ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ರಿಷಬ್ ಪಂತ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ದೀಪಕ್ ಚಹರ್, ಭುವನೇಶ್ವರ್ ಕುಮಾರ್.