Publish Date: Thu, 24 Oct 2019 (17:03 IST)
Updated Date: Thu, 24 Oct 2019 (17:04 IST)
ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಮುಂದಿನ ತಿಂಗಳು ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.
ಸತತ ಕ್ರಿಕೆಟ್ ನಿಂದ ಬಳಲಿರುವ ಕೊಹ್ಲಿಗೆ ಕೆಲವು ದಿನಗಳ ವಿಶ್ರಾಂತಿ ನೀಡುವ ಬಗ್ಗೆ ಕೆಲವು ದಿನಗಳ ಮೊದಲೇ ಬಿಸಿಸಿಐ ಸುಳಿವು ನೀಡಿತ್ತು. ಅದರಂತೆ ಕೊಹ್ಲಿಯನ್ನು ಹೊರಗಿಡಲಾಗಿದ್ದು, ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಗಿದೆ. ಯುವ ಆಟಗಾರ ಶಿವಂ ದುಬೆಗೆ ಚೊಚ್ಚಲ ಅವಕಾಶ ನೀಡಲಾಗಿದೆ. ವಿಕೆಟ್ ಕೀಪರ್ ಸ್ಥಾನದಲ್ಲಿ ರಿಷಬ್ ಪಂತ್ ಜತೆಗೆ ಸಂಜು ಸ್ಯಾಮ್ಸನ್ ಗೂ ಸ್ಥಾನ ನೀಡಲಾಗಿದೆ. ಗಾಯಗೊಂಡು ವಿಶ್ರಾಂತಿಯಲ್ಲಿರುವ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾರನ್ನು ಆಯ್ಕೆ ಪರಿಗಣಿಸಲಾಗಿರಲಿಲ್ಲ.
ಇನ್ನು ಟೆಸ್ಟ್ ಸರಣಿಗೂ ತಂಡದ ಆಯ್ಕೆ ಮಾಡಲಾಗಿದ್ದು, ವಿರಾಟ್ ಕೊಹ್ಲಿಯೇ ನಾಯಕರಾಗಿದ್ದಾರೆ. ಟೆಸ್ಟ್ ತಂಡದಲ್ಲಿ ವಿಶೇಷ ಬದಲಾವಣೆಯೇನೂ ಆಗಿಲ್ಲ. ಹಾಗಿದ್ದರೂ ದ.ಆಫ್ರಿಕಾ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಶಹಬಾಜ್ ನದೀಂರನ್ನು ಕಡೆಗಣಿಸಿ ಶಬ್ನಂ ಗಿಲ್ ಗೆ ಅವಕಾಶ ನೀಡಲಾಗಿದೆ.
ಟಿ20 ಮತ್ತು ಟೆಸ್ಟ್ ತಂಡಗಳು ಇಂತಿವೆ:
ಟಿ20: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್, ವಾಷಿಂಗ್ಟನ್ ಸುಂದರ್, ಕೃಣಾಲ್ ಪಾಂಡ್ಯ, ಯಜುವೇಂದ್ರ ಚಾಹಲ್, ರಾಹುಲ್ ಚಹರ್, ದೀಪಕ್ ಚಹರ್, ಖಲೀಲ್ ಅಹಮ್ಮದ್, ಶಿವಂ ದುಬೆ, ಶ್ರಾದ್ಧೂಲ್ ಠಾಕೂರ್.
ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನೆ, ಹನುಮ ವಿಹಾರಿ, ವೃದ್ಧಿಮಾನ್ ಸಹಾ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ರಿಷಬ್ ಪಂತ್, ಶಬ್ನಂ ಗಿಲ್.