Publish Date: Sat, 20 Jul 2024 (14:50 IST)
Updated Date: Sat, 20 Jul 2024 (14:52 IST)
ಮುಂಬೈ: ಟೀಂ ಇಂಡಿಯಾ ಟಿ20 ತಂಡದ ನಾಯಕರಾಗಿ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ಸಂದೇಶ ಬರೆಯುವ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.
ರೋಹಿತ್ ಶರ್ಮಾ ನಿವೃತ್ತಿ ಬಳಿಕ ಟಿ20 ಕ್ರಿಕೆಟ್ ಗೆ ಭಾರತ ತಂಡದ ನಾಯಕತ್ವ ಯಾರ ಹೆಗಲಿಗೇರಬಹುದು ಎಂಬ ಕುತೂಹಲವಿತ್ತು. ಹಾರ್ದಿಕ್ ಪಾಂಡ್ಯ ನಾಯಕರಾಗಬಹುದು ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಕೊನೆಯ ಕ್ಷನದಲ್ಲಿ ರೇಸ್ ನಲ್ಲಿ ಸೂರ್ಯಕುಮಾರ್ ಎಂಟ್ರಿಯಾಗಿತ್ತು.
ಇದಕ್ಕೆ ತಂಡದ ಆಟಗಾರರ ಅಭಿಪ್ರಾಯವೂ ಮುಖ್ಯವಾಗಿತ್ತು ಎನ್ನಲಾಗಿದೆ. 33 ವರ್ಷದ ಸೂರ್ಯಕುಮಾರ್ ಯಾದವ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದಾದ ಬಳಿಕ ಇದೇ ಮೊದಲ ಬಾರಿಗೆ ಸೂರ್ಯ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮಗೆ ಬೆಂಬಲ ನೀಡಿದವರಿಗೆ ಸೋಷಿಯಲ್ ಮೀಡಿಯಾದಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.
ನಿಮ್ಮೆಲ್ಲಾ ಪ್ರೀತಿ, ಹಾರೈಕೆಗಳಿಗೆ ತುಂಬಾ ಧನ್ಯವಾದಗಳು. ಕಳೆದ ಕೆಲವು ವಾರಗಳು ಕನಸಿನಂತೆ ಭಾಸವಾಗಿದ್ದವು ಮತ್ತು ಅದಕ್ಕೆ ನಾನು ಆಭಾರಿಯಾಗಿದ್ದೇನೆ. ದೇಶಕ್ಕಾಗಿ ಆಡುವುದು ನನ್ನ ದೊಡ್ಡ ಕನಸು ಮತ್ತು ಅದನ್ನು ನಾನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ಹೊಸ ಜವಾಬ್ಧಾರಿ ಹೊಸ ಅನುಭವ, ಖುಷಿ ತಂದಿದೆ. ನಿಮ್ಮ ಈ ಬೆಂಬಲ ಮುಂದೆಯೂ ಮುಂದುವರಿಯಲಿದೆ ಎಂದು ಭಾವಿಸಿದ್ದೇನೆ. ಎಲ್ಲವೂ ದೇವರಿಗೇ ಬಿಟ್ಟಿದ್ದು, ದೇವರು ದೊಡ್ಡವನು ಎಂದು ಸೂರ್ಯ ಬರೆದುಕೊಂಡಿದ್ದಾರೆ.