Publish Date: Wed, 17 Jul 2024 (12:25 IST)
Updated Date: Wed, 17 Jul 2024 (12:27 IST)
ಮುಂಬೈ: ಇತ್ತೀಚೆಗೆ ಉಡುಪಿಯ ಮಾರಿಗುಡಿಗೆ ಭೇಟಿ ನೀಡಿದ್ದ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಗೆ ಮಾಡಿದ್ದ ಪ್ರಾರ್ಥನೆ ಕೊನೆಗೂ ಫಲಿಸಿತು. ಇದೀಗ ಸೂರ್ಯ ಟೀಂ ಇಂಡಿಯಾಗೆ ಟಿ20 ಮಾದರಿಯಲ್ಲಿ ನಾಯಕರಾಗುವುದು ಬಹುತೇಕ ಖಚಿತವಾಗಿದೆ.
ಟಿ20 ವಿಶ್ವಕಪ್ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಕಿರು ಮಾದರಿಯಿಂದ ನಿವೃತ್ತಿ ಪ್ರಕಟಿಸಿದರು. ಹೀಗಾಗಿ ತಂಡಕ್ಕೆ ಈಗ ದೀರ್ಘ ಅವಧಿಗೆ ಟಿ20 ಮಾದರಿಯಲ್ಲಿ ಹೊಸ ನಾಯಕನ ಅಗತ್ಯವಿದೆ. ಆ ಸ್ಥಾನವನ್ನು ಹಾರ್ದಿಕ್ ಪಾಂಡ್ಯಗೆ ನೀಡಬಹುದು ಎಂದೇ ಎಲ್ಲರ ಊಹೆಯಾಗಿತ್ತು. ಯಾಕೆಂದರೆ ಪಾಂಡ್ಯ ಉಪನಾಯಕರಾಗಿದ್ದರು. ಅಲ್ಲದೆ, ಈಗಾಗಲೇ ಹಲವು ಬಾರಿ ಟೀಂ ಇಂಡಿಯಾವನ್ನು ಟಿ20 ಮಾದರಿಯಲ್ಲಿ ಮುನ್ನಡೆಸಿ ಯಶಸ್ಸು ಪಡೆದಿದ್ದರು.
ಆದರೆ ಗೌತಮ್ ಗಂಭೀರ್ ಕೋಚ್ ಆಗಿ ತಂಡಕ್ಕೆ ಬರುತ್ತಿದ್ದಂತೇ ದಿಡೀರ್ ಎಲ್ಲವೂ ಬದಲಾಗಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಜೊತೆ ಇತ್ತೀಚೆಗೆ ಮಾತುಕತೆ ನಡೆಸಿದ್ದ ಗಂಭೀರ್ ಮುಂದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಸೂರ್ಯಗೆ ನಾಯಕತ್ವ ನೀಡಲು ಸೂಚನೆ ನೀಡಿದ್ದರು. ಅದರಂತೆ ಈಗ 30 ಹಾರ್ದಿಕ್ ಗೆ ಕೊನೆಯ ಕ್ಷಣದಲ್ಲಿ ಶಾಕ್ ಸಿಕ್ಕಿದ್ದು, 33 ವರ್ಷದ ಸೂರ್ಯಗೆ ನಾಯಕತ್ವ ಸಿಗುತ್ತಿದೆ.
ಇತ್ತೀಚೆಗೆ ಮಾರಿಗುಡಿಗೆ ಭೇಟಿ ನೀಡಿದ್ದ ವೇಳೆ ಅರ್ಚಕರು ಪ್ರಾರ್ಥನೆ ಮಾಡುವಾಗ ಮುಂದೊಂದು ದಿನ ಭಾರತ ತಂಡದ ನಾಯಕರಾಗಲು ದೇವಿ ನಿಮಗೆ ಆಶೀರ್ವಾದ ಮಾಡಲಿ ಎಂದು ಹರಸಿದ್ದರು. ಆ ಪ್ರಾರ್ಥನೆ ಈಗ ಫಲಿಸಿದ್ದು, ಸೂರ್ಯ ಟಿ20 ಮಾದರಿಗೆ ಭಾರತ ತಂಡದ ನಾಯಕರಾಗುವುದು ಬಹುತೇಕ ಖಚಿತವಾಗಿದೆ.