Publish Date: Thu, 18 Jul 2024 (14:22 IST)
Updated Date: Thu, 18 Jul 2024 (14:24 IST)
ಮುಂಬೈ: ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲು ಕೆಲವೇ ಕ್ಷಣಗಳು ಬಾಕಿಯಿರುವಾಗ ತಂಡದಲ್ಲಿ ಸ್ಥಾನ ಪಡೆಯಲು ಹವಣಿಸುತ್ತಿರುವ ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ಏನು ಮಾಡಿದ್ದಾರೆ ನೋಡಿ.
ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾಗ ಯಾವುದೇ ಆಟಗಾರರೂ ವಿಶ್ರಾಂತಿ ಅಥವಾ ಗಾಯದ ಬಳಿಕ ತಂಡಕ್ಕೆ ಸೇರ್ಪಡೆಯಾಗಬೇಕಾದರೆ ದೇಶೀಯ ಕ್ರಿಕೆಟ್ ಆಡಿ ಫಿಟ್ನೆಸ್ ಸಾಬೀತುಪಡಿಸಬೇಕು ಎಂಬ ನಿಯಮವಿತ್ತು. ಆದರೆ ಇದಕ್ಕೆ ಡೋಂಟ್ ಕೇರ್ ಮಾಡಿದ್ದ ಇಶಾನ್ ಕೆಲವು ಸಮಯದಿಂದ ತಂಡಕ್ಕೆ ಆಯ್ಕೆಯಾಗುತ್ತಲೇ ಇಲ್ಲ.
ನಿಯಮ ಪಾಲಿಸದ ಇಶಾನ್ ರನ್ನು ಆಯ್ಕೆ ಸಮಿತಿಯೂ ಕಡೆಗಣಿಸಿತ್ತು. ಇತ್ತೀಚೆಗೆ ಸಂದರ್ಶನದಲ್ಲಿ ಈ ಬಗ್ಗೆ ಅವರು ಬೇಸರ ಹೊರಹಾಕಿದ್ದರು. ಆದರೆ ಇದೀಗ ಭಾರತ ತಂಡಕ್ಕೆ ನೂತನ ಕೋಚ್ ಗೌತಮ್ ಗಂಭೀರ್ ಆಗಮನವಾಗಿದೆ. ಗಂಭೀರ್ ಸದಾ ಯುವ ಆಟಗಾರರಿಗೆ ಪ್ರೋತ್ಸಾಹ ನೀಡುತ್ತಾರೆ. ಇದೀಗ ಕೆಲವು ನಿಯಮಗಳೂ ಬದಲಾಗಲಿವೆ. ಹೀಗಾಗಿ ಮತ್ತೆ ತಂಡದಲ್ಲಿ ಸ್ಥಾನ ಸಿಗಬಹುದು ಎಂಬ ಭರವಸೆಯಲ್ಲಿ ಇಶಾನ್ ಇದ್ದಾರೆ.
ಇಂದು ಟೀಂ ಇಂಡಿಯಾ ಘೋಷಣೆಯಾಗುವ ಸಾಧ್ಯತೆಯಿದ್ದು ಅದಕ್ಕೆ ಮುನ್ನ ಇಶಾನ್ ಶಿರಡಿಯ ಸಾಯಿ ಬಾಬ ಸಮಾಧಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಮತ್ತೆ ಟೀಂ ಇಂಡಿಯಾಕ್ಕೆ ಆಯ್ಕೆ ಮಾಡುವಂತೆ ಸಾಯಿ ಬಾಬನ ಮೊರೆ ಹೋಗಿದ್ದಾರೆ.