ನವದೆಹಲಿ: ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಶುಭ ಸುದ್ದಿ. ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತೆ ಬ್ಯಾಟ್ ಹಿಡಿಯಲು ಸಜ್ಜಾಗಿದ್ದಾರೆ.
ಏಷ್ಯಾ ಕಪ್ ಟೂರ್ನಿಗೆ ಅಜಿತ್ ಅಗರಕರ್ ನೇತೃತ್ವದ ಬಿಸಿಸಿಯ ಆಯ್ಕೆ ಸಮಿತಿ ಭಾರತ ತಂಡವನ್ನು ಆಯ್ಕೆ ಮಾಡಲು ಇದೇ 19ರಂದು ಸಭೆ ಸೇರಲಿದೆ. ಈ ನಡುವೆ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಐಪಿಎಲ್ನಲ್ಲಿ ಸರಣಿಯಲ್ಲಿ ರನ್ ಹೊಳೆ ಹರಿಸಿದ್ದ ಸೂರ್ಯ ನಂತರ ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ. ಹೊಟ್ಟೆಯ ಕೆಳ ಬಲಭಾಗದಲ್ಲಿ ಸ್ಪೋರ್ಟ್ಸ್ ಹರ್ನಿಯಾಕ್ಕೆ ಅವರು ಜರ್ಮನಿಯ ಮ್ಯೂನಿಕ್ನಲ್ಲಿ ಜೂನ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಐಪಿಎಲ್ನಲ್ಲಿ ಸೂರ್ಯಕುಮಾರ್ 717 ರನ್ ಬಾರಿಸಿದ್ದರು. ಆರೇಂಜ್ ಕ್ಯಾಪ್ ಗೆದ್ದ ಸಾಯಿ ಸುದರ್ಶನ್ (759 ರನ್) ನಂತರ ರನ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದರು.
ಸೂರ್ಯ ಅವರು ಮುಂಬೈನಲ್ಲಿ ಮುಂದಿನ ಮಂಗಳವಾರ ಆಯ್ಕೆಸಮಿತಿ ಸಭೆಗೆ ಹಾಜರಾಗುವುದು ಖಚಿತವಾಗಿದೆ. ಏಷ್ಯಾ ಕಪ್ ಸೆಪ್ಟೆಂಬರ್ 9 ರಿಂದ 28ರವರೆಗೆ ಯುಎಇಯಲ್ಲಿ ನಡೆಯಲಿದೆ. ಭಾರತ ಸೆ. 10ರಂದು ಆತಿಥೇಯ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.