Publish Date: Fri, 29 Mar 2024 (11:40 IST)
Updated Date: Fri, 29 Mar 2024 (11:52 IST)
ಮುಂಬೈ: ಹರ್ನಿಯಾ ಶಸ್ತ್ರಚಿಕಿತ್ಸೆಗೊಳಗಾಗಿರುವುದರಿಂದ ಐಪಿಎಲ್ ನಿಂದ ಹೊರಗುಳಿದಿರುವ ಮುಂಬೈ ಇಂಡಿಯನ್ಸ್ ಬ್ಯಾಟಿಗ ಸೂರ್ಯಕುಮಾರ್ ಯಾದವ್ ಫಿಟ್ನೆಸ್ ಬಗ್ಗೆ ಲೇಟೆಸ್ಟ್ ಅಪ್ ಡೇಟ್ ಒಂದು ಬಂದಿದೆ.
ಸೂರ್ಯಕುಮಾರ್ ಯಾದವ್ ಕಳೆದ ವಿಶ್ವಕಪ್ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದ ನಾಯಕರಾಗಿದ್ದರು. ಕೊನೆಯ ಪಂದ್ಯದಲ್ಲಿ ಪಾದ ಟ್ವಿಸ್ಟ್ ಮಾಡಿಕೊಂಡಿದ್ದ ಸೂರ್ಯ ಕ್ರಿಕೆಟ್ ನಿಂದ ದೂರವುಳಿದರು. ಅದರ ಬೆನ್ನಲ್ಲೇ ಅವರಿಗೆ ಹರ್ನಿಯಾ ಸಮಸ್ಯೆ ಕಾಣಿಸಿಕೊಂಡಿದ್ದು, ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ.
ಸದ್ಯಕ್ಕೆ ಅವರು ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಎನ್ ಸಿಎ ತಜ್ಞರು ಫಿಟ್ನೆಸ್ ಸರ್ಟಿಫಿಕೇಟ್ ನೀಡುವವರೆಗೆ ಅವರಿಗೆ ಐಪಿಎಲ್ ನಲ್ಲಿ ಆಡಲು ಸಾಧ್ಯವಿಲ್ಲ. ಸೂರ್ಯ ಫಿಟ್ನೆಸ್ ಬಗ್ಗೆ ಅಪ್ ಡೇಟ್ ನೀಡಿರುವ ಬಿಸಿಸಿಐ ಮೂಲಗಳು, ಅವರು ಬೇಗನೇ ಚೇತರಿಸಿಕೊಳ್ಳುತ್ತಿದ್ದು ಸದ್ಯದಲ್ಲೇ ತಂಡಕ್ಕೆ ವಾಪಸ್ ಆಗಲಿದ್ದಾರೆ ಎಂದಿವೆ.
ಸದ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ. ಇದೀಗ ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ನಂತಹ ಬ್ಯಾಟಿಗರ ಅಗತ್ಯ ತಂಡಕ್ಕಿದೆ. ಹೀಗಾಗಿ ಅವರು ಆದಷ್ಟು ಬೇಗ ಚೇತರಿಸಿಕೊಂಡು ತಂಡಕ್ಕೆ ಮರಳುವುದು ಅಗತ್ಯವಾಗಿದೆ.