Publish Date: Tue, 31 Jul 2018 (09:27 IST)
Updated Date: Tue, 31 Jul 2018 (09:29 IST)
ಮುಂಬೈ: ಟೀಂ ಇಂಡಿಯಾದಲ್ಲಿ ಹಲವು ಕ್ರಿಕೆಟಿಗರ ವೃತ್ತಿ ಜೀವನ ಅರಳಲು ಅಂದು ನಾಯಕರಾಗಿದ್ದ ಸೌರವ್ ಗಂಗೂಲಿ ಕಾರಣರಾಗಿದ್ದರು. ಅವರಲ್ಲಿ ಧೋನಿ ಕೂಡಾ ಒಬ್ಬರು.
2004 ರಲ್ಲಿ ಧೋನಿ ಬಾಂಗ್ಲಾದೇಶದಲ್ಲಿ ಗಂಗೂಲಿ ನಾಯಕತ್ವದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಆಗ ಅವರು 7 ನೇ ಕ್ರಮಾಂಕದಲ್ಲಿ ಆಡಲಿಳಿದು ಕಳಪೆ ಪ್ರದರ್ಶನ ತೋರಿದ್ದರು. ಆದರೆ ಗಂಗೂಲಿಗೆ ಧೋನಿ ಮೇಲೆ ಅಪಾರ ವಿಶ್ವಾಸವಿತ್ತು. ಈತನನ್ನು ಹೇಗಾದರೂ ಕ್ಲಿಕ್ ಮಾಡಬೇಕೆಂದು ಗಂಗೂಲಿ ಪಣ ತೊಟ್ಟಿದ್ದರಂತೆ.
ಅದಕ್ಕಾಗಿ ವಿಶಾಖಪಟ್ಟಣದಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಏಕದಿನ ಪಂದ್ಯಕ್ಕೆ ಮೊದಲು ಗಂಗೂಲಿ ತಂಡದ ಸಭೆ ನಡೆಸಿ ಧೋನಿಗೆ 7 ನೇ ಕ್ರಮಾಂಕವೆಂದು ನಿರ್ಧರಿಸಿದ್ದರಂತೆ. ಆದರೆ ಪಂದ್ಯದ ಮುನ್ನಾ ದಿನ ತಮ್ಮ ಕೊಠಡಿಯಲ್ಲಿ ಕುಳಿತು ಟಿವಿ ನೋಡುತ್ತಿದ್ದ ಗಂಗೂಲಿಗೆ ಧೋನಿಯನ್ನು ಹೇಗಾದರೂ ಬ್ರೇಕ್ ಕೊಡಬೇಕು ಅನಿಸಿತಂತೆ. ಆಗಲೇ ಅವರಿಗೆ ಸಡನ್ನಾಗಿ ಧೋನಿಯನ್ನು ಮೂರನೇ ಕ್ರಮಾಂಕದಲ್ಲಿ ಆಡಿಸುವ ಆಲೋಚನೆ ಬಂತಂತೆ.
ಅದರಂತೆ ಪಂದ್ಯದ ದಿನ ಪ್ರಾಕ್ಟೀಸ್ ಮಾಡುತ್ತಿದ್ದ ಧೋನಿ ಬಳಿ ಬಂದ ಗಂಗೂಲಿ ನೀನು ಈವತ್ತು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡು ಎಂದು ಶಾಕ್ ಕೊಟ್ಟರಂತೆ. ಹಾಗಿದ್ದರೆ ನೀವು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೀರಿ ಎಂದು ಧೋನಿ ಕೇಳಿದಾಗ ಗಂಗೂಲಿ ನಾನು ನಾಲ್ಕನೇ ಕ್ರಮಾಂಕದಲ್ಲಿ ಬರುವೆ ಎಂದರಂತೆ.
ಗಂಗೂಲಿ ಲೆಕ್ಕಾಚಾರ ತಪ್ಪಲಿಲ್ಲ. ಈ ಪಂದ್ಯದಲ್ಲಿ ಧೋನಿ 148 ರನ್ ಚಚ್ಚಿದರು. ಇದು ಅವರ ವೃತ್ತಿ ಜೀವನಕ್ಕೇ ತಿರುವಿನ ಪಂದ್ಯವಾಯಿತು. ಈ ವಿಚಾರವನ್ನು ಸ್ವತಃ ಗಂಗೂಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.