Publish Date: Sat, 24 Aug 2019 (10:15 IST)
Updated Date: Sat, 24 Aug 2019 (10:17 IST)
ಮುಂಬೈ: ಟೀಂ ಇಂಡಿಯಾ ಆಯ್ಕೆಗಾರನ ಮುಖ್ಯಸ್ಥನಾಗಿ ಅನಿಲ್ ಕುಂಬ್ಳೆ ನೇಮಕವಾಗಬೇಕು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ ಬೆನ್ನಲ್ಲೇ ಮಾಜಿ ನಾಯಕ ಸೌರವ್ ಗಂಗೂಲಿ ಕೂಡಾ ಇದೇ ಮಾತು ಹೇಳಿದ್ದಾರೆ.
‘ಕುಂಬ್ಳೆ ರಾಷ್ಟ್ರೀಯ ತಂಡದ ಮುಖ್ಯ ಆಯ್ಕೆಗಾರನಾದರೆ ಅದಕ್ಕಿಂತ ಉತ್ತಮವಾದದ್ದು ಇನ್ನೇನಿದೆ? ಅವರು ಅನುಭವಿ, ಪ್ರಾಮಾಣಿಕ ಮತ್ತು ಭಾರತದ ದಿಗ್ಗಜ ಕ್ರಿಕೆಟಿಗ. ಅವರ ಜತೆಗೆ ಸೆಹ್ವಾಗ್ ಕೂಡಾ ಆಯ್ಕೆ ಸಮಿತಿಯಲ್ಲಿರಬೇಕು. ಸೆಹ್ವಾಗ್ ಯಾವತ್ತೂ ಗೆಲುವಿಗಾಗಿಯೇ ಆಡಿದವರು. ಅವರಿಗೆ ಕ್ರಿಕೆಟ್ ಬಗ್ಗೆ ತಮ್ಮದೇ ಆದ ವಿಶಿಷ್ಠ ದೃಷ್ಟಿಕೋನವಿದೆ. ಇಬ್ಬರೂ ಆಯ್ಕೆ ಸಮಿತಿಯಲ್ಲಿದ್ದರೆ ಅದಕ್ಕಿಂತ ಖುಷಿಯ ವಿಚಾರ ಇನ್ನೊಂದಿಲ್ಲ’ ಎಂದು ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.
ಅಷ್ಟೇ ಅಲ್ಲದೆ, ಮುಂದೊಂದು ದಿನ ಟೀಂ ಇಂಡಿಯಾ ಕೋಚ್ ಆಗುವ ಆಸೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಮತ್ತೆ ಪುನರುಚ್ಚರಿಸಿದ್ದಾರೆ. ವಿರಾಟ್ ಕೊಹ್ಲಿ ಜತೆ ಕೋಚ್ ಆಗಿ ಕೆಲಸ ಮಾಡಲು ಅವಕಾಶ ಸಿಕ್ಕರೆ ನಿಜಕ್ಕೂ ಖುಷಿಯಾಗಬಹುದು ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.