Publish Date: Thu, 15 May 2025 (11:12 IST)
Updated Date: Thu, 15 May 2025 (11:14 IST)
ಇಸ್ಲಾಮಾಬಾದ್: ಮೊನ್ನೆಯಷ್ಟೇ ಭಾರತ ಮತ್ತು ಪಾಕಿಸ್ತಾನ ಕದನದ ಬಗ್ಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮತ್ತೊಮ್ಮೆ ಭಾರತದ ವಿರುದ್ಧ ಕಿಡಿ ಕಾರಿದ್ದಾರೆ. ಪಾಕಿಸ್ತಾನದ ಅಭಿವೃದ್ಧಿಯನ್ನು ಭಾರತವೇ ತಡೆಯುತ್ತಿದೆ ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಭಾರತದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಭಾರತ ಅಭಿವೃದ್ಧಿಯಾಗುತ್ತಿರುವುದಕ್ಕೆ ಸಂತೋಷವಿದೆ. ಆ ದೇಶದ ಕ್ರಿಕೆಟ್ ಕೂಡಾ ಅಭಿವೃದ್ಧಿಯಲ್ಲಿದೆ. ಆದರೆ ಅವರಿಗೆ ನಾವು ಪ್ರಗತಿಯಾಗುವುದು ಬೇಕಿಲ್ಲ ಎಂದಿದ್ದಾರೆ.
ನಾವು ಮುಂದೆ ಸಾಗುತ್ತಿದ್ದಂತೇ ಅವರು ನಮ್ಮನ್ನು ತಡೆಯುತ್ತಿದ್ದಾರೆ. ನೆರೆಹೊರೆಯ ರಾಷ್ಟ್ರಗಳು ಈ ರೀತಿ ಇರಲು ಸಾಧ್ಯವೇ? ಪಾಕಿಸ್ತಾನ್ ಅಭಿವೃದ್ಧಿ ಸಾಧಿಸುವುದು ಅವರಿಗೆ ಬೇಕಿಲ್ಲ. ಹೀಗಾಗಿ ನಮ್ಮನ್ನು ತಡೆಯುತ್ತಿದ್ದಾರೆ. ತಮ್ಮ ದೇಶದ ಜನರೇ ತಮಗೆ ದೊಡ್ಡ ಶತ್ರುಗಳು ಎಂಬುದನ್ನು ಅವರು ಮರೆತಿದ್ದಾರೆ ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.
ಮೊನ್ನೆಯಷ್ಟೇ ಭಾರತ ದಾಳಿ ಮಾಡಿದರೆ ಪಾಕಿಸ್ತಾನವೂ ತಕ್ಕ ತಿರುಗೇಟು ನೀಡಲಿದೆ ಎಂದು ಅಫ್ರಿದಿ ಕಿಡಿ ಕಾರಿದ್ದರು. ಭಾರತ ಪಾಕಿಸ್ತಾನ ಕದನ ವಿರಾಮ ಬೆನ್ನಲ್ಲೇ ತಮ್ಮ ದೇಶವೇ ಗೆದ್ದಿತು ಎಂಬಂತೆ ಬೀದಿ ಬೀದಿಯಲ್ಲಿ ಮೆರವಣಿಗೆ ಸಾಗಿ ಟ್ರೋಲ್ ಗೊಳಗಾಗಿದ್ದರು.