ದುಬೈ: ಇತ್ತೀಚೆಗಷ್ಟೇ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತದ ವಿರುದ್ಧ ಕಿಡಿ ಕಾರಿದ್ದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿಯನ್ನು ದುಬೈನ ಕೇರಳೀಯರ ಸಂಘವೊಂದು ತಮ್ಮ ಕಾರ್ಯಕ್ರಮಕ್ಕೆ ಕರೆಸಿಕೊಂಡಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚೆಗಷ್ಟೇ ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿ 26 ಜನರನ್ನು ಕೊಂದು ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ನಡೆಸಿ ಪಾಕ್ ಪ್ರೇರಿತ ಉಗ್ರರನ್ನು ಕೊಂದು ಹಾಕಿತ್ತು. ಇದರ ಬೆನ್ನಲ್ಲೇ ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣವಿತ್ತು.
ಈ ವೇಳೆ ಇದೇ ಶಾಹಿದ್ ಅಫ್ರಿದಿ ಭಾರತದ ವಿರುದ್ಧವೇ ಕಿಡಿ ಕಾರಿದ್ದರು. ಅವಕಾಶ ಸಿಕ್ಕಾಗಲೆಲ್ಲಾ ಅವರು ಭಾರತದ ವಿರುದ್ಧ ಕಿಡಿ ಕಾರುತ್ತಲೇ ಇರುತ್ತಾರೆ. ಇದೇ ವ್ಯಕ್ತಿಯನ್ನು ಈಗ ದುಬೈನ ಕೇರಳೀಯರ ಸಂಘವೊಂದು ತಮ್ಮ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿದೆ.
ಅಷ್ಟೇ ಅಲ್ಲ ಕ್ರಿಕೆಟಿಗನಿಗೆ ಅದ್ಧೂರಿ ಸ್ವಾಗತ ನೀಡಿದೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಪಹಲ್ಗಾಮ್ ದಾಳಿಯಲ್ಲಿ ಉಗ್ರರಿಂದ ಸಾವನ್ನಪ್ಪಿದವರಲ್ಲಿ ಕೇರಳ ಮೂಲದ ವ್ಯಕ್ತಿಯೂ ಒಬ್ಬರಿದ್ದರು. ಅದೆಲ್ಲಾ ಈ ಕೇರಳೀಯರಿಗೆ ನೆನಪಿಲ್ಲವೇ? ಇಂಥಾ ಕೆಲಸ ಮಾಡಲು ನಾಚಿಕೆ ಆಗಲ್ವೇ? ಅಥವಾ ಅತಿಥಿಯಾಗಿ ಭಾರತೀಯರು ಬೇರೆ ಯಾರೂ ಸಿಗಲ್ವೇ? ಎಂದು ನೆಟ್ಟಿಗರು ಝಾಡಿಸಿದ್ದಾರೆ.