Publish Date: Tue, 21 Jan 2025 (10:13 IST)
Updated Date: Tue, 21 Jan 2025 (10:18 IST)
ಲಕ್ನೋ: ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗೆ ಈ ಸೀಸನ್ ನ ದುಬಾರಿ ಆಟಗಾರ ರಿಷಭ್ ಪಂತ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಅದರ ಬೆನ್ನಲ್ಲೇ ಕೆಎಲ್ ರಾಹುಲ್ ಫ್ಯಾನ್ಸ್ ನಿಮ್ಮನ್ನು ದೇವ್ರೇ ಕಾಪಾಡಬೇಕು ಎಂದು ಟ್ರೋಲ್ ಮಾಡಿದ್ದಾರೆ.
ಇದುವರೆಗೆ ಲಕ್ನೋ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಿದ್ದರು. ಆದರೆ ಕಳೆದ ಸೀಸನ್ ನಲ್ಲಿ ತಂಡದ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದ ಮಾಲಿಕ ಸಂಜಯ್ ಗೊಯೆಂಕಾ ಮೈದಾನದಲ್ಲೇ ಕೆಎಲ್ ರಾಹುಲ್ ರನ್ನು ತರಾಟೆಗೆ ತೆಗೆದುಕೊಂಡಿದ್ದು ಭಾರೀ ಸುದ್ದಿಯಾಗಿತ್ತು.
ನಿರೀಕ್ಷೆಯಂತೇ ಈ ಐಪಿಎಲ್ ನಲ್ಲಿ ರಾಹುಲ್ ರನ್ನು ಲಕ್ನೋ ಕೈ ಬಿಟ್ಟಿತ್ತು. ಅವರೀಗ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. ರಾಹುಲ್ ಗೆ ಅಂದು ಮೈದಾನದಲ್ಲಿ ಮಾಡಿದ ಅವಮಾನವನ್ನು ಸ್ಮರಿಸಿರುವ ಫ್ಯಾನ್ಸ್ ಈಗ ರಿಷಭ್ ರನ್ನು ಟ್ರೋಲ್ ಮಾಡುತ್ತಿದ್ದಾರೆ.
ನಾಯಕರಾಗಿ ಯಶಸ್ಸು ಗಳಿಸಿದಿರೋ ಬಚಾವ್, ಇಲ್ಲದೇ ಹೋದರೆ ದೇವರೇ ನಿಮ್ಮನ್ನು ಕಾಪಾಡಬೇಕು ಎಂದು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ನಿನ್ನೆ ವಿಶೇಷ ಕಾರ್ಯಕ್ರಮದ ಮೂಲಕ ರಿಷಭ್ ಪಂತ್ ರನ್ನು ಕ್ಯಾಪ್ಟನ್ ಎಂದು ಸಂಜೀವ್ ಗೊಯೆಂಕಾ ಘೋಷಣೆ ಮಾಡಿದ್ದರು. ಆ ಬಳಿಕ ಮಾತನಾಡಿದ್ದ ಅವರು ಐಪಿಎಲ್ ನಲ್ಲಿ ಯಶಸ್ವೀ ನಾಯಕ ಎಂದರೆ ಎಲ್ಲರೂ ರೋಹಿತ್, ಧೋನಿ ಹೆಸರು ಹೇಳುತ್ತಾರೆ. ನನಗೆ ವಿಶ್ವಾಸವಿದೆ, ಮುಂದಿನ ದಿನಗಳಲ್ಲಿ ಆ ಲಿಸ್ಟ್ ನಲ್ಲಿ ರಿಷಭ್ ಹೆಸರೂ ಇರಲಿದೆ ಎಂದಿದ್ದರು.