Publish Date: Sat, 11 Jan 2025 (13:59 IST)
Updated Date: Sat, 11 Jan 2025 (14:02 IST)
ಮುಂಬೈ: ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಬ್ರೇಕ್ ಕೇಳಿದ್ದ ಕೆಎಲ್ ರಾಹುಲ್ ಗೆ ಅಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲಿಗೆ ಕೆಎಲ್ ರಾಹುಲ್ ಗೂ ಅದೇ ಪ್ರಾಬ್ಲಂ ಎಂಬಂತಾಗಿದೆ.
ಸಾಮಾನ್ಯ ನೌಕರರಿಗೂ ಕೆಲವೊಮ್ಮೆ ರಜೆ ಕೇಳಿದಾಗ ಮೇಲಧಿಕಾರಿಗಳಿಂದ ರಜೆಯೆಲ್ಲಾ ಕೊಡಕ್ಕಾಗಲ್ಲ ಎಂದು ಹೇಳಿ ನಿರಾಸೆಯಾಗುವುದು ಇದೆ. ಈಗ ರಾಹುಲ್ ಪರಿಸ್ಥಿತಿಯೂ ಅದೇ ಆಗಿದೆ. ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಗರ್ಭಿಣಿಯಾಗಿದ್ದು ಕುಟುಂಬದ ಜೊತೆ ಕೆಲವು ಕಾಲ ಸಮಯ ಕಳೆಯಲು ರಾಹುಲ್ ಈಗ ಬ್ರೇಕ್ ಗಾಗಿ ಮನವಿ ಮಾಡಿದ್ದರು ಎನ್ನಲಾಗಿದೆ.
ಆದರೆ ಅಜಿತ್ ಅಗರ್ಕರ್ ಸದ್ಯಕ್ಕೆ ಬ್ರೇಕ್ ಕೊಡಲು ಸಾಧ್ಯವಿಲ್ಲ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಲಭ್ಯವಿರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಕೆಎಲ್ ರಾಹುಲ್ ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ತಂಡದ ಭಾಗವಾಗಲಿದ್ದಾರೆ.
ಈ ಸರಣಿಗೆ ಮುನ್ನ ಅಭ್ಯಾಸ ನಡೆಸಲು ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ನಿರ್ಣಾಯಕವಾಗಿದೆ. ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿರುವವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡದಲ್ಲಿರಬೇಕೆಂದು ಅಗರ್ಕರ್ ಸೂಚಿಸಿದ್ದಾರಂತೆ. ಹೀಗಾಗಿ ರಾಹುಲ್ ಬ್ರೇಕ್ ಕ್ಯಾನ್ಸಲ್ ಆಗಿದೆ ಎನ್ನಲಾಗುತ್ತಿದೆ.